ಬೀದರ್: ಮಹಿಳೆಯರ ಯಶಸ್ಸಿಗೆ ಪುರುಷರು ಬೆನ್ನೆಲುಬಾಗಬೇಕಿದೆ ಎಂದು ಕೃಷಿ ಅಧಿಕಾರಿ ಆರತಿ ಪಾಟೀಲ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆ ಈಗ ಅಬಲೆಯಲ್ಲ, ಸಬಲೆ. ಪ್ರತಿ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದಾಳೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ ಎಂದು ತಿಳಿಸಿದರು.
ಬೀದರ್ನಲ್ಲಿ ಅನೇಕ ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದು ಸಾಹಿತಿ ಜಗದೇವಿ ದುಬಲಗುಂಡೆ ಹೇಳಿದರು.
ಮಹಿಳೆಯರು ಸಾಹಿತ್ಯ, ಕಲೆ, ಸಂಸ್ಕøತಿ ಉಳಿವಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಬಸವಾದಿ ಶರಣರು ಹನ್ನೆರಡನೆಯ ಶತಮಾನದಲ್ಲೇ ಮಹಿಳೆಯರಿಗೆ ಸಮಾನತೆ ಕಲ್ಪಿಸಿದ್ದರು. ಆದರೆ, 21ನೇ ಶತಮಾನದಲ್ಲಿ ಮಹಿಳೆಯರು ಸಮಾನತೆಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಇದೆ ಎಂದು ಅಧ್ಯಕ್ಷತೆ ವಹಿಸಿದ್ದ ಪರಿಷತ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೆ ಮುಕ್ತ ಅವಕಾಶ ಕೊಡಬೇಕು ಎಂದು ತಿಳಿಸಿದರು.
ಮಹಿಳೆಯರನ್ನು ಪುರುಷರಿಗೆ ಸರಿ ಸಮನಾಗಿ ಕಾಣಬೇಕು ಎಂದು ಬಸವ ಕಾಯಕ, ದಾಸೋಹ ಫೌಂಡೇಷನ್ ಕಾರ್ಯದರ್ಶಿ ಸುವರ್ಣಾ ಧನ್ನೂರ ಹೇಳಿದರು.
ಲಿಂಗಾರತಿ ಅಲ್ಲಮಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳ 16 ಸಾಧಕಿಯರಿಗೆ ಸ್ತ್ರೀ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಿಲ್ಪಾ ಮಜಗೆ ನಿರೂಪಿಸಿದರು. ಸ್ವರೂಪಾ ನಾಗೂರೆ ಸ್ವಾಗತಿಸಿದರು. ಜ್ಯೋತಿ ಭಾಲ್ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದ ಮಹಿಳೆಯರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು.