ಶ್ರೇಷ್ಠ ಕೃತಿಗಳ ಓದಿನಿಂದ ಅರಿವು ವಿಸ್ತಾರ : ಡಾ. ಸಂಜೀವಕುಮಾರ ಅತಿವಾಳೆ
ಬಸವಕಲ್ಯಾಣ: ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಶ್ರೇಷ್ಠ ಸಾಹಿತ್ಯ ಕೃತಿಗಳ ಓದಿನಿಂದ ಅರಿವು ವಿಸ್ತರಿಸಿಕೊಳ್ಳಬಹುದು ಎಂದು
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ. ಸಂಜೀವಕುಮಾರ ಅತಿವಾಳೆ ಹೇಳಿದರು.
ನಗರದ ಎಸ್ ಎಸ್ ಕೆ ಬಿ ಕಾಲೇಜಿನಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೀದರನ ಚಕೋರ ಸಾಹಿತ್ಯ ವಿಚಾರ ವೇದಿಕೆ ಹಾಗೂ ಎಸ್ ಎಸ್ ಕೆ ಬಸವೇಶ್ವರ ಪದವಿ ಕಾಲೇಜು ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರ ‘ಹೊಸ ವಿಚಾರಗಳು’ ಕುರಿತ ವಿಶೇಷ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ವಿವೇಚನೆಗಳನ್ನು ಮೂಡಿಸುವ ಕೆಲಸ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತದೆ. ಹೊಸ ಪ್ರತಿಭೆಗಳಿಗೆ ಸಾಹಿತ್ಯ ಅಕಾಡೆಮಿ ವೇದಿಕೆಯಾಗಿದೆ ಎಂದರು.
ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಅವರು ಮಾತನಾಡಿ,
ಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆ ಇರಬೇಕು. ಓದುವುದು ಒಂದು ತಪಸ್ಸಿನಂತೆ ಪರಿಗಣಿದರೆ ಭವಿಷ್ಯ ರೂಪಿಸಿಕೊಳ್ಳುತ್ತದೆ. ಸದ್ಯದ ಸಂದರ್ಭದಲ್ಲಿ ಹಲವು ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಬೇಕು. ಜ್ಞಾನದ ವಲಯವನ್ನು ವಿಸ್ತರಿಸಲು, ಅರ್ಥೈಸಿಕೊಳ್ಳಲು ಯತ್ನಿಸಿ ಎಂದರು.
ತೇಜಸ್ವಿ ಅವರು ಕನ್ನಡದ ಬಹುದೊಡ್ಡ ಓದುಗ ಬಳಗ ಹೊಂದಿದ ಲೇಖಕರು. ಅವರ ಬರಹದಲ್ಲಿ ಕಾಡು, ನೆಲ, ನಿಸರ್ಗದ ವಿಸ್ಮಯ ಮತ್ತು ಕೌತುಕಗಳು ಅಡಕವಾಗಿದೆ ಎಂದರು.
ಸಾಮಾಜಿಕ ಜಾಲತಾಣಗಳಿಗೆ ಅಧಿಕೃತತೆ ಇರುವುದಿಲ್ಲ. ಅಲ್ಲಿ ಹುಸಿ ಸುದ್ದಿಗಳಿರುತ್ತವೆ. ಪತ್ರಿಕೆಗಳಿಗೆ ಹಾಗೂ ಕೃತಿಗಳಿಗೆ ಅಧಿಕೃತ ಬರಹಗಾರರಿರುತ್ತಾರೆ. ಸದ್ಯದ ವಿದ್ಯಮಾನಗಳನ್ನು ಅರಿಯಲು ಪತ್ರಿಕೆಗಳ ಅಗತ್ಯವಿದೆ ಎಂದರು.
ಓದು ಅಧ್ಯಯನ ವ್ಯಕ್ತಿಯನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿ ಬೆಳೆಸುತ್ತವೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನೀವು ಮುಂದುವರೆದರೆ ಸೃಜನಶೀಲತೆ ಸೃಷ್ಟಿಸಬಹುದು. ಮಾಧ್ಯಮ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಪ್ರತಿಭೆಗೆ ಹೆಚ್ಚು ಆದ್ಯತೆಯಿದೆ. ಮಾಧ್ಯಮಕ್ಷೇತ್ರಕ್ಕೆ ಹೊಸ ಪೀಳಿಗೆ ಪ್ರವೇಶ ಅಗತ್ಯವಿದೆ ಎಂದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ‘ಹೊಸ ವಿಚಾರಗಳು ‘ ಕೃತಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ ಭೀಮಾಶಂಕರ ಬಿರಾದಾರ ಮಾತನಾಡಿ, ತೇಜಸ್ವಿ ಅವರ ಬರಹ ಸಾಂಸ್ಕೃತಿಕ ಸಂಶೋಧನೆಯ ಸ್ವರೂಪವಾಗಿದೆ. ಸಣ್ಣ ಸಣ್ಣ ಜೀವಿಗಳಿಂದ ದೊಡ್ಡ ಪ್ರಾಣಿಗಳ ಬಗೆಗೂ ಬರೆದಿದ್ದಾರೆ. ಕಾಡಿನ ಕ್ರೌರ್ಯದಂತೆ ನಾಗರಿಕ ಜಗತ್ತಿನ ಕ್ರೌರ್ಯದ ಕಥನವು ಅವರ ಲೇಖನಗಳಲ್ಲಿದೆ ಎಂದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಒಟ್ಟು ಬರಹದಲ್ಲಿ ಸಮಾಜ, ರಾಜಕಾರಣ, ಪರಿಸರ, ಆರ್ಥಿಕತೆ ಸೇರಿ ಲೋಕ ವಿಮರ್ಶೆಯ ಮಾದರಿಯೊಂದು ಕಾಣುತ್ತೇವೆ. ಅವರ ಬರಹಕ್ಕೆ ಸಮಕಾಲೀನ ಸ್ಪಂದನೆಯ ಗುಣವಿದೆ ಎಂದು ಹೇಳಿದರು.
ಲೋಕ ವಿಮರ್ಶೆ ಹಾಗೂ ಜೀವನ ಶೋಧ ತೇಜಸ್ವಿ ಬರಹದ ತಾತ್ವಿಕತೆಯಾಗಿದೆ. ಸಮಾಜದ ಸ್ಥಗಿತತೆ ಮೀರುವ ದಾರಿಗಳು, ಮನುಷ್ಯನೂ ಸೇರಿ ಎಲ್ಲ ಜೀವಿಗಳ ಅಸ್ತಿತ್ವ ಅರಿಯಲು, ಪರಿಸರ ಪ್ರಜ್ಞೆ ರೂಪಿಸಿಕೊಳ್ಳಲು, ಲೋಕದ ಸಂಕೀರ್ಣತೆ ಕಂಡುಕೊಳ್ಳಲು ತೇಜಸ್ವಿ ಬರಹ ದಾರಿಯಾಗಿವೆ ಎಂದರು.
ಜಾಗತಿಕ ಅರ್ಥ ವ್ಯವಸ್ಥೆ, ರೈತರ ಕಷ್ಟಗಳು, ರಾಜಕಾರಣಿಗಳ ಬೇಜವಾಬ್ದಾರಿ, ಕನ್ನಡಕ್ಕೆ ತೆರೆದುಕೊಳ್ಳಬೇಕಾದ ತಂತ್ರಜ್ಞಾನಗಳ ಬಗೆಗೆ ಗಾಢವಾದ ಚಿಂತನೆ, ಮಾರುವವರ ಹಾಗೂ ಗ್ರಾಹಕರ ಸಂಸ್ಕೃತಿಯಾಗಿ ಮಾರ್ಪಟ್ಟ ವ್ಯಕ್ತಿಯ ಜೀವನ ವಿಧಾನದ ಕುರಿತು ಅವರ ‘ಹೊಸ ವಿಚಾರಗಳು’ ಕೃತಿಯಲ್ಲಿ ಚರ್ಚಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಡಾ. ಶಿವಕುಮಾರ ಪಾಟೀಲ ಮಾತನಾಡಿ, ಪುಸ್ತಕ ಓದುವ ಹವ್ಯಾಸ ಕಡಿಮೆಯಾದದ್ದು ಅತ್ಯಂತ ನೋವಿನ ಸಂಗತಿ. ಓದಿನಿಂದಲೇ ಜ್ಞಾನದ ವಿಸ್ತಾರ ಸಾಧ್ಯ. ಓದಿನ ಹಸಿವಿನಿಂದಲೇ ತಿಳುವಳಿಕೆ ಹೆಚ್ಚಾಗುತ್ತದೆ. ಪಕ್ಷಿ ಹಾಗೂ ಪ್ರಾಣಿಲೋಕದ ಬಗೆಗೆ ಹೆಚ್ಚು ನಿರ್ದಿಷ್ಟ ಮತ್ತು ವೈಜ್ಞಾನಿಕವಾಗಿ ತೇಜಸ್ವಿ ಬರೆದಿದ್ದಾರೆ ಎಂದರು.
ಭಾಲ್ಕಿಯ ನಿವೃತ್ತ ಗ್ರಂಥಪಾಲಕ ಉಮೇಶ ಮಾಸಿಮಾಡೆ, ಬೀದರ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಯೋಜಕಿ ಡಾ. ಮಕ್ತುಂಬಿ ಎಂ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಬನಮ್ ಹಾಗೂ ಜಯಶ್ರೀ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
ಡಾ. ಸುರೇಶ ಎಚ್.ಆರ್. ಕಲ್ಯಾಣಪ್ಪಾ ನಾಗವದಗಿ, ನಾಗಪ್ಪಾ ನಿಣ್ಣೆ, ಸೂರ್ಯಕಾಂತ ನಾಸೆ, ಭಾರತಿ ಮಠ, ಶಿಲ್ಪಾ ಬಿರಾದಾರ, ಪೂಜಾ ಮೊದಲಾದವರಿದ್ದರು.
ಪ್ರೊ. ವಿಠೋಬಾ ಡೊಣ್ಣೆಗೌಡರ್ ಸ್ವಾಗತಿಸಿದರು. ಭೀಮಾಶಂಕರ ಪೂಜಾರಿ ನಿರೂಪಿಸಿದರು. ಡಾ. ರಮೇಶ ಕೆ. ಬಿ. ವಂದಿಸಿದರು.