ಬೀದರ್ : ಇಂದಿನ ಯುವಕರು ಮತ್ತು ಯುವತಿಯರು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಭವ್ಯ ಭಾತರದ ದೇಶಿ ಸಂಸ್ಕೃತಿಯನ್ನು ಮರೆತು, ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಅವರು ಮಂಗಳವಾರ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್ (ರಿ) ಬೀದರ್ ಇವರ ಸಂಯುಕ್ತಾಶ್ರಯದಲ್ಲಿ 2020-21ನೇ ಸಾಲಿನ ಸಂಘ ಸಂಸ್ಥೆಗಳ ಗಿರಿಜನ ಉಪಯೋಜನೆಯಡಿ ಏರ್ಪಡಿಸಿದ ಜಿಲ್ಲಾ ಮಟ್ಟದ ಜನಪದ ಸಡಗರ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಜಾನಪದ ಸಂಸ್ಕೃತಿ ಕಡಿಮೆಯಾಗುತ್ತಿದೆ. ಭವ್ಯ ಭಾರತ ಅನೇಕ ಭಾಷೆಗಳ ದೇಶ, ಭಾಷೆಗಳೇ ಇಲ್ಲದೇ ಇದ್ದರೇ ನಾವು ಮಾನವರು ಕಾಡು ಪ್ರಾಣಿಗಳಾಗಿ ಬಾಳುತ್ತಿದ್ದೇವು ಎಂದ ಅವರು ಜಾನಪದ ಕಲಾವಿದರು ಜಾನಪದದ ಮೂಲಕ ನಮ್ಮ ಪ್ರಾಚೀನ ಸಂಸ್ಕೃತಿ ಪರಂಪರೆಗಳನ್ನು ಉಳಿಸಿಕೊಂಡು ಬಂದಿರುವರು. ಕನ್ನಡ ಭಾಷೆಗೆ ವಚನ ಸಾಹಿತ್ಯ, ದಾಸ ಸಾಹಿತ್ಯ ಸೇರಿದಂತೆ ಅನೇಕ ಸಾಹಿತ್ಯಗಳು ಕನ್ನಡಕ್ಕೆ ಶ್ರೀಮಂತ ಭಾಷೆಯನ್ನಾಗಿ ಮಾಡಿವೆ ಎಂದು ಕೊಂಡಾಡಿದರು.

ಕರ್ನಾಟಕ ಸರಕಾರಿ ನೌಕರರ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಸೋನಾರೆ ಅವರು ಮಾತನಾಡಿ, ಈ ಹಿಂದಿನ ಮಹಿಳೆಯರು ತಾವು ತೊಡುವ ಉಡುಪುಗಳು, ಆಭರಣಗಳು, ವೇಷ-ಭೂಷಣಗಳು ನಮ್ಮ ಜಾನಪದ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದವು. ಆದರೇ ಇಂದಿನ ಯಾಂತ್ರಿಕ ಜೀವನದಲ್ಲಿ ಅವುಗಳೆಲ್ಲ ಬದಲಾವಣೆಗೊಂಡಿವೆ. ಜನಪದರು ಆಯಾ ಸ್ಥಳ ಅಲ್ಲಿಯ ನೆಲ, ಜಲ, ಭಾಷೆ, ಪರಿಸರ ಅಲ್ಲಿಯ ಜನ ಜೀವನ ಶೈಲಿ ವೃತ್ತಾಂತಗಳನ್ನು ತಮ್ಮ ಹಾಡುಗಳ ಮೂಲಕ ಒಗಟುಗಳ ಮೂಲಕ ವ್ಯಕ್ತಪಡಿಸುತ್ತಿದ್ದರು ಎಂದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೋ. ಮನೋಜಕುಮಾರ ಕುಲಕರ್ಣಿ ಅವರು ಮಾತನಾಡಿ, ಆಧುನಿಕ ಬದಲಾವಣೆಯ ಭರಾಟೆಯಲ್ಲಿ ನಾವು ಜೀವನವನ್ನು ಸಾಗಿಸುತ್ತಿದ್ದೇವೆ. ಒತ್ತಡದ ಬದುಕಿನಿಂದ ಶಾಂತಿ ನೆಮ್ಮದಿ ಕಳೆದುಕೊಂಡಿದ್ದೇವೆ. ಅವುಗಳನ್ನು ಪಡೆಯಲು ಜಾನಪದ ಹಾಡು ಆಲಿಸಬೇಕು. ಜಾನಪದ ಆಟಗಳನ್ನು ವಿಕ್ಷಿಸಬೇಕೆಂದ ಅವರು ಮಹಿಳೆಯರಿಂದಲೇ ಜಾನಪದ ಕಲೆ ಉಳಿಸಲು ಸಾಧ್ಯ ಎಂದರು.

ಸಂಗೀತ ಕಲಾವಿದ ಶಿವಕುಮಾರ ಪಾಂಚಾಳ ವಚನ ಗಾಯನ, ಮಲ್ಲಿಕಾರ್ಜುನ್ ನಾಗಮಾರಪಳ್ಳಿ ತಂಡದಿಂದ ತತ್ವಪದ ಗಾಯನ, ಪುಂಡಲೀಕ್ ಪಾಟೀಲ್ ತಂಡದಿಂದ ಭಜನೆ ಪದ, ಮಾರುತಿ ಚಾಂಬೋಳ ತಂಡದಿಂದ ತತ್ವಪದಗಾಯನ, ಶ್ರೀಮತಿ ಸೀಮಾ ತಂಡದಿಂದ ಲಂಬಾಣಿ ನೃತ್ಯ, ಸಂಜೀವಕುಮಾರ ಸ್ವಾಮಿ ತಂಡದಿಂದ ಜಾನಪದ ಗಾಯನ, ಶಿವಕುಮಾರ ಅಣದೂರವಾಡಿ ತಂಡದಿಂದ ಕಂಸಾಳೆ ನೃತ್ಯ, ಸಂಜೀವಕುಮಾರ ತಂಡದಿಂದ ಜಾನಪದ ಗಾಯನ, ಕುಮಾರಿ ಸಂಜನಾ ತಂಡದಿಂದ ಲಂಬಾಣಿ ನೃತ್ಯ, ಶಂಕರ ಚೊಂಡಿ ತಂಡದಿಂದ ಹಂತಿ ಪದ, ಶಿವಾಜಿರಾವ್ ಶೇರಿಕಾರ್ ತಂಡದಿಂದ ಜಾನಪದ ಗಾಯನ, ಶ್ರೀಮತಿ ಕರುಣಾ ತಂಡದಿಂದ ಮಹಿಳಾ ಕೋಲಾಟ, ಆಶಾ ಪಾಟೀಲ್ ತಂಡದಿಂದ ಜಾನಪದ ನೃತ್ಯ, ಚಂದ್ರಕಾಂತ ಬೆಳಕುಣಿ ತಂಡದಿಂದ ಜಾನಪದ ಕೋಲಾಟ, ಬಸವರಾಜ ಕುಂಬಾರ ತಂಡದಿಂದ ಭೂತೇರ್ ಕುಣೀತ, ಮಲ್ಲಿಕಾರ್ಜುನ್ ಸ್ವಾಮಿ ತಂಡದಿಂದ ತತ್ವಪದ ಗಾಯನ, ದೇವಿದಾಸ್ ಚಿಮಕೋಡ್ ತಂಡದಿಂದ ಜಾನಪದ ಗಾಯನ, ಕು. ಅಂಬಿಕಾ ಸೋನಿಕಾ ತಂಡದಿಂದ ಜಾನಪದ ನೃತ್ಯ, ಶ್ರೀಮತಿ ಮಹೇಶ್ವರಿ ತಂಡದಿಂದ ಸುಗಮ ಸಂಗೀತ ವಚನ ಗಾಯನ, ಶ್ರೀಮತಿ ಪವೀತ್ರರಿಂದ ವಚನ ಗಾಯನ, ಕು. ತೃಷಾ ಬಾಲೇಬಾಯಿರಿಂದ ಭರತನಾಟ್ಯ, ಕು. ಸುಧಾರಾಣಿ ತಂಡದಿಂದ ಜಾನಪದ ನೃತ್ಯ ಜರುಗಿತು. ಶ್ರೀಮತಿ ಅಂಬಿಕಾ ತಂಡ ಸೇರಿದಂತೆ ವಿವಿಧ ತಂಡದಿAದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೆಕ್ಷಕರ ಮನಗಳನ್ನು ರಂಜಿಸಿದವು.
ಈ ಸಮಾರಂಭದಲ್ಲಿ ಇತ್ತಿಚೆಗೆ ಕರ್ನಾಟಕ ಜಾನಪದ ಅಕಾಡೇಮಿಯ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರಾದ ಮಾರುತಿ ಕೋಳಿ ಚಾಂಬೋಳ, ಕರ್ನಾಟಕ ಸರಕಾರಿ ನೌಕರರ ಮಹಿಳಾ ಘಟಕದ ಬೀದರ ಜಿಲ್ಲಾಧ್ಯಕ್ಷೆ ಶ್ರೀಮತಿ ಬಿ.ಜೆ. ಪಾರ್ವತಿ ಸೋನಾರೆ, ಮತ್ತು ಕರ್ನಾಟಕ ಬಂಜಾರಾ ಭಾಷೆ ಮತ್ತು ಸಂಸ್ಕೃತಿ ಅಕಾಡೇಮಿಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಆಶಾ ರಾಠೋಡ್ ಅವರುಗಳಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಕರ್ನಾಟಕ ಜನಪದ ಅಕಾಡೇಮಿ ಸದಸ್ಯ ವಿಜಯಕುಮಾರ ಸೋನಾರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಹಿರಿಯ ಕಲಾವಿದ ಶಂಭುಲಿಂಗ್ ವಾಲ್ದೋಡ್ಡಿ, ಮಹರ್ಷಿ ವಾಲ್ಮೀಕಿ ಸೋಶಿಯಲ್ ಐಂಡ್ ಕಲ್ಚರಲ್ ಟ್ರಸ್ಟ್ನ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಕುಮಾರಿ ಕ್ಲೆಮೆಂಟಿನಾ, ರಾಜ್ಯ ಶಾಸ್ತç ವಿಭಾಗದ ಮುಖ್ಯಸ್ಥ ಡಾ. ಮನೋಹರ್ ಮೇತ್ರೆ, ಕದಂಬ ನ್ಯೂಸ್ ಕನ್ನಡ ಸುದ್ದಿವಾಹಿನಿಯ ಸಿದ್ದು ಖಾನಾಪೂರೆ, ಉದ್ಯಮಿ ನಂದಕುಮಾರ ಜಮಗಿಕರ್, ಮುಖಂಡ ರವಿಂದ್ರ ಬಾಲೆಬಾಯಿ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿಜಯಕುಮಾರ ಭಂಡೆ ಸ್ವಾಗತಿಸಿದರು, ಚಂದ್ರಕಾಂತ ಹಳ್ಳಿಖೇಡಕರ್ ಅಚ್ಚುಕಟ್ಟಾಗಿ ನಿರೂಪಿಸಿದರು. ಎಂ.ಪಿ.ಮುದಾಳೆ ವಂದಿಸಿದರು.