ಔರಾದ್ : ಸಹಜವಾಗಿ ಹುಟ್ಟಿದ ಕಾವ್ಯ ಜನರ ಮನಸ್ಸನ್ನು ಶಾಶ್ವತವಾಗಿ ಹಿಡಿದಿಡುವ ಕೆಲಸ ಮಾಡುತ್ತದೆ ಎಂದು ಸಾಹಿತಿ ತಾಲೂಕು ಖಜಾನೆ ಅಧಿಕಾರಿ ಮಾಣಿಕ ನೇಳಗಿ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ದಸರಾ ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕವನಗಳು ಜನರ ಮನಸ್ಸಿಗೆ ತಟ್ಟುವ ಜೊತೆಗೆ ಎಚ್ಚರಗೊಳಿಸಿ ಪರಿವರ್ತಿಸುವ ಮಹತ್ಕಾರ್ಯ ಮಾಡುತ್ತವೆ.
ಕನ್ನಡದ ಆದಿಕವಿ ಪಂಪ, ಪೊನ್ನ, ರನ್ನ ಸೇರಿದಂತೆ ಅನೇಕರು ರಾಜಾಶ್ರಯದಲ್ಲಿದ್ದ ಕವಿಗಳಾದರೂ ಸಹ ಕಾವ್ಯಧರ್ಮವನ್ನು ಮರೆತವರಿಲ್ಲ. ಅವರ ವಿಚಾರಗಳು ಇಂದಿಗೂ ಜನರನ್ನು ಆಕರ್ಷಿಸುವಲ್ಲಿ ಮಹತ್ತರ ಸ್ಥಾನ ಪಡೆದಿವೆ. ಬಳಿಕ ವಚನಕಾರರು, ಕೀರ್ತನಕಾರರು, ದಲಿತಕವಿಗಳು, ಬಂಡಾಯ ಸಾಹಿತಿಗಳು ಸ್ವಾತಂತ್ರö್ಯ ವಿಚಾರಗಳು ವ್ಯಕ್ತಪಡಿಸಿದ್ದು ವಿಶಿಷ್ಟವಾಗಿದೆ.
ನಾಡಿನ ಹಿರಿಯ ವಿದ್ವಾಂಸರು, ಸಾಹಿತಿಗಳು ಬರೆದ ಬರಹಗಳು, ಕವನಗಳು ಓದುವ ಸಂಸ್ಕೃತಿ ಯುವಕರು ರೂಢಿಸಿಕೊಳ್ಳಬೇಕಿದೆ. ಹೆಚ್ಚೆಚ್ಚು ಓದುವ ಮೂಲಕ ಶಬ್ದಸಂಪತ್ತು ಹೆಚ್ಚಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಪ್ರಯತ್ನ ಮಾಡಬೇಕು. ದಸರಾ ಕೇವಲ ನಾಡಿನ ವೈಭವ ಪರಿಚಯಿಸುವ ಹಬ್ಬವಾಗದೇ ನಾಡಿನ ಪ್ರಗತಿಗೆ ಪೂರಕವಾಗಿ ಬಡವರ ಶೋಷಿತರ, ದಮನಿತರ ಸಂಭ್ರಮದ ಹಬ್ಬವಾಗಲಿ ಎಂದರು.

ಆಶಯ ನುಡಿ ವ್ಯಕ್ತಪಡಿಸಿದ ಪ್ರಕಾಶ ದೇಶಮುಖ, ಕವನಗಳು ಸಾಮಾಜಿಕ ಬದ್ದತೆ, ಸಮಾಜಮುಖಿ ಚಿಂತನೆ ಒಳಗೊಂಡಿರಬೇಕು. ಬದುಕಿನ ವಾಸ್ತವಿಕತೆಯ ಪರಿಚಯ ಕವನಗಳ ರೂಪದಲ್ಲಿ ರಚನೆಯಾಗಬೇಕು. ದೀರ್ಘ ಕವನಗಳಿಗೂ ಹನಿಗವನಗಳಿಗೂ ತುಂಬ ವ್ಯತ್ಯಾಸವಿದ್ದು, ನಮ್ಮ ತಾಳ್ಮೆಯ ಪ್ರತಿರೂಪವಾದ ಹನಿಗವನಗಳು ಸಾಹಿತ್ಯದ ರಸದೌತಣ ನೀಡಲು ಸಾಧ್ಯವಿಲ್ಲ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ಪ್ರಸ್ತುತ ಜನಮಾನಸದಲ್ಲಿ ಆಂಗ್ಲ ವ್ಯಾಮೋಹ ಹೆಚ್ಚಾಗಿದ್ದು ಮೌಲ್ಯಗಳ ಅಧಃಪತನ ಶುರುವಾಗಿದೆ. ನಾವುಗಳು ಪುನಃ ಕನ್ನಡದ ಕಡೆಗೆ ಮುಖ ಮಾಡುವ ದಿನಗಳು ದೂರವಿಲ್ಲ. ಕನ್ನಡವೆಂದರೆ ಕೇವಲ ಭಾಷೆಯಲ್ಲ ಅದು ಜನರಲ್ಲಿ ಮೌಲ್ಯಗಳು ತುಂಬುವ ಸಂಸ್ಕಾರ ಬಿತ್ತುವ ನಮ್ಮ ಸ್ವಾಭಿಮಾನದ ಕುರುಹು ಅದಾಗಿದೆ ಎಂದರು.
ಸಾಹಿತಿ ಸೂರ್ಯಕಾಂತ ರ್ಯಾಕಲೆ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ ಮಾತನಾಡಿದರು. ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಾನಂದ ಸ್ವಾಮಿ, ಎಚಿಡಿ ನಯೀಮ್, ರಂಜೀತ ಸಿಂಧೆ, ರಮೇಶ ಪಾಂಚಾಳ, ಸವಿತಾ ಮೀಸೆ, ಶಿಲ್ಪಾ ರಾಜೋಳೆ, ನಾಗೇಂದ್ರ ಚಿಟಗಿರೆ, ಪ್ರಕಾಶ ಬರ್ದಾಪೂರೆ, ವಿರೇಶ ಅಲಮಾಜೆ ಕವನ ವಾಚನ ಮಾಡಿದರು.

ಸಾಧಕರಿಗೆ ಸನ್ಮಾನ : ಸಮಾರಂಭದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದತ್ತಾತ್ರಿ ಗಿರಿ, ಮಹಾದೇವ ಭಾಲೇಕರ್, ಸಂಜೀವ ಬಿರಾದಾರ್, ಗುಣವಂತ ಬಿರಾದಾರ್, ಕೈಲಾಸಪತಿ ಕೇದಾರೆ ರಾಜ್ಯ ಮಟ್ಟದ ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತ ರವೀಂದ್ರ ಡಿಗ್ಗಿ, ಪೀರಪ್ಪ ಉಜನೀಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಅಮರ ಸ್ವಾಮಿ, ಜಗನ್ನಾಥ ಮೂಲಗೆ, ಸಂದೀಪ ಪಾಟೀಲ್, ಅಂಬಾದಾಸ ನಳಗೆ, ಗೋವಿಂದ ಪಾಟೀಲ್, ಮಹಾದೇವ ಘುಳೆ, ಗಜಾನನ ಮಳ್ಳಾ, ಅಶೋಕ ಅಲಮಾಜೆ ಸೇರಿದಂತೆ ಇನ್ನಿತರರಿದ್ದರು.
– ಬಿ.ಎಂ ಅಮರವಾಡಿ
