ವಿಶ್ವ ಆದಿವಾಸಿ ದಿನಾಚರಣೆಯ ಅದ್ದೂರಿ ಸಂಭ್ರಮ.
ಬೀದರ್ : ವಿಶ್ವ ಆದಿವಾಸಿ ದಿನಾಚರಣೆಯ ಹಿನ್ನೆಲೆ ಶನಿವಾರ ರಾಜಗೊಂಡ ಸಮುದಾಯದ ವತಿಯಿಂದ ಅದ್ದೂರಿ ಮೆರವಣಿಗೆ ನಡೆಯಿತು.
ಮೆರವಣಿಗೆ ಚಾಲನೆಗೂ ಮುನ್ನ ಸುಮಾರು ನೂರು ದ್ವಿ ಚಕ್ರ ವಾಹನ ಹಾಗೂ ಹತ್ತು ನಾಲ್ಕು ಚಕ್ರ ವಾಹನಗಳೊಂದಿಗೆ ರಾಜಗೊಂಡ ಕಾಲೋನಿಯಿಂದ ರ್ಯಾಲಿ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತದವರೆಗೆ ತಲುಪಿತು.
ನಂತರ ಅಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಅವರ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ತದನಂತರ ಭಗವಾನ್ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ರಾಜಗೊಂಡರು ಮತ್ತು ಮೇಧಾ (ಪಾರ್ದಿ ) ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಳದಿ ಹಾಗೂ ಶ್ವೇತ ವರ್ಣದ ಉಡುಗೆ, ಧ್ವಜಗಳೊಂದಿಗೆ ಹೆಜ್ಜೆ ಹಾಕಿದರು. ಕೆಲವು ಮಕ್ಕಳು ಆದಿವಾಸಿಗಳಂತೆ ವಸ್ತ್ರ ಧರಿಸಿ ಗಮನ ಸೆಳೆದರು.
ರಾಜಗೊಂಡ ಸಮಾಜದ ಅಧ್ಯಕ್ಷ ಪಿ ಟಿ ಶಾಮು ಅವರು ಮಾತನಾಡಿ, ಅಲೆಮಾರಿ, ಅರೆ ಅಲೆಮಾರಿಯಾಗಿರುವ ರಾಜಗೊಂಡ, ಮೇಧಾ, ಪಾರ್ದಿ ಸಮುದಾಯಗಳಿಗೆ ದೊರೆಯಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ, ಈಗಲೂ ಅವರು ಅತ್ಯಂತ ಹೀನಾಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಯೋಜನೆಗಳು ಕೇವಲ ಇಲಾಖೆಗಳಲ್ಲಿಯೇ ಉಳಿದಿವೆ ಅವುಗಳು ನಮ್ಮನ್ನು ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಯುವ ಮುಖಂಡರಾದ ವಿವೇಕ್ ರಾಯ್ಶಿಡಂ ಮಾತನಾಡಿ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಂತೆ ಪರಿಶಿಷ್ಟ ಪಂಗಡಗಳಾದ ರಾಜಗೊಂಡ, ಮೇಧಾ ಪಾರ್ದಿಗಳಿಗೆ ಆಯೋಗ ರಚಿಸಿ ಒಳ ಮೀಸಲಾತಿ ಕಲ್ಪಿಸಬೇಕು. ರಾಜಗೊಂಡರ ಸಂಸ್ಕೃತಿಕ ನಾಯಕರಾದ ಬಾಬುರಾವ ಶೇಡ್ಮಕಿ, ರಾಣಿ ಕಮಲಾಪತಿ, ಕುಂರಾಮ್ ಭೀಮ್, ರಾಣಿ ದುರ್ಗಾವತಿ ಅವರ ಜೀವನ ಚರಿತ್ರೆಗಳನ್ನು ಶಾಲಾ ಪಠ್ಯಯಲ್ಲಿ ಸೇರಿಸಬೇಕು.
ಗೊಂಡರ ಮಾತೃ ಭಾಷೆಯಾಗಿರುವ ಗೊಂಡಿಯನ್ನು ಶಾಸ್ತ್ರಿಯ ಸ್ಥಾನಮಾನ ನೀಡಿ 8ನೇ ಅನುಸೂಚಿಯಲ್ಲಿ ಸೇರಿಸಬೇಕು ಎಂದರು.
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದಿರ್ ಮಾತನಾಡಿ, ದೇಶದ ಮೂಲ ನಿವಾಸಿಗಳೇ ಆದಿವಾಸಿಗಳು ಇವರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಸಮಾಜದ ಪ್ರತಿಯೊಬ್ಬರೂ ಇವರ ಏಳಿಗೆಗೆ ಶ್ರಮಿಸಬೇಕು. ಇವರಿಗೆ ಶಿಕ್ಷಣ, ವಸತಿ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡಬೇಕು. ಅಂದಾಗ ಮಾತ್ರ ಅವರು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಹೇಳಿದರು.
ವಿಶಾಲ ರಾಯಶಿಡಂ ಅವರು ಮಾತನಾಡಿ ನಮಗೆ ಎಲ್ಲಾ ಪಕ್ಷಗಳು ಒಂದೇ ನಾವು ಯಾವುದೇ ರೀತಿಯಾಗಿ ಯಾರಿಗೂ ದೋಷಸುವುದಿಲ್ಲ, ಅವರೆಲ್ಲರೂ ಕೂಡ ನಮನ್ನು ಒಂದೇ ರೀತಿಯಾಗಿ ನೋಡಬೇಕು ಹಾಗೂ ನಮ್ಮ ಏಳಿಗೆಗೆ ಶ್ರಮಿಸಬೇಕು ಎಂದರು.
ಮೆರವಣಿಗೆಯಲ್ಲಿ ರಾಜಗೊಂಡ ಸಮಾಜದ ಕಾರ್ಯದರ್ಶಿ, ಠಾಕುರ್ ಉಯ್ಕೆ, ಪಾರ್ದಿ ಸಮಾಜ ಅಧ್ಯಕ್ಷ ರಾಜೇಂದ್ರ ಪಾರ್ದಿ, ಮೇಧಾ ಸಮಾಜದ ಅಧ್ಯಕ್ಷ ಮಹೇಶ್ ಮೇಧಾ, ಕರ್ನಾಟಕ ಗೊಂಡ ಆದಿವಾಸಿ ಸಂಘದ ಉಪಾಧ್ಯಕ್ಷ ಪಂಡಿತರಾವ್ ಚಿದ್ರಿ, ಕರ್ನಾಟಕ ಗೊಂಡ ಆದಿವಾಸಿ ಸಂಘದ ಪ್ರಧಾನ ಕಾರ್ಯದರ್ಶಿ ಮಾಳಪ್ಪ ಅಡಸಾರೆ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಅಧ್ಯಕ್ಷ ನಾರಾಯಣರಾವ್ ಭಂಗಿ, ಟೋಕರಿ ಕೋಳಿ ಸಮಾಜದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಣಿಕ್ ನೆಳಗಿ, ಸಂಗೊಳ್ಳಿ ರಾಯಣ್ಣ ಗೊಂಡ ಸಂಘದ ಅಧ್ಯಕ್ಷ ಬಾಬುರಾವ ಮಲ್ಕಾಪುರ, ಟೋಕರಿ ಕೋಳಿ ಸಮಾಜ ಸಂಘದ ಉಪಾಧ್ಯಕ್ಷ ಸುನಿಲ್ ಖಾಶೇಂಪೂರ್, ಜಿಲ್ಲಾ ಸಂಚಾಲಕ ಸುನಿಲ್ ಭಾವಿಕಟ್ಟಿ, ಗೊಂಡ ಹಾಗೂ ಟೋಕರೆ ಕೋಳಿ ಸಮುದಾಯದ ಮುಖಂಡರುಗಳಾದ ಈಶ್ವರ ಮಲ್ಕಾಪೂರ್, ಬಾಬುರಾವ್ ಖಾಶೇಂಪೂರ್,ರವಿಕುಮಾರ್ ಸಿರ್ಸಿ, ಜಗನ್ನಾಥ ಜಂಬಗಿ, ಪುಂಡಲೀಕರಾವ್ ಇಟಗಂಪಳ್ಳಿ, ವಿಜಯಕುಮಾರ್ ಡುಮ್ಮೆ, ದೀಪಕ್ ಚಿದ್ರಿ, ಭೋಮ್ಮಗೊಂಡ ಚಿಟ್ಟಾವಾಡಿ, ರಘುನಾಥ ಭೂರೆ, ರವಿ ಇಂಜಿನಿಯರ್, ಹಣಮಂತರಾವ್ ಘೋಡಂಪಳ್ಳಿ, ಚಂದ್ರಕಾಂತ್ ಫುಲೆಕರ್ ಹಾಗೂ ರಾಜಗೊಂಡ್ ಸಮಾಜದ ಸುಮಾರು 1000 ಜನ, ಪಾರ್ದಿ ಸಮಾಜ ದಿಂದ 200 ಜನ, ಮೇಧಾ ಸಮಾಜದಿಂದ 200 ಜನ ಉಪಸ್ಥಿತರಿದ್ದರು.
