ಕೆರೆಗಳ ಪುನಶ್ಚೇತನ, ಉದ್ಯಾನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ:
ಬೆಂಗಳೂರು : ಬೀದರ್ ಜಿಲ್ಲೆಯಲ್ಲಿರುವ 29 ಕೆರೆಗಳ ಪುನಶ್ಚೇತನಕ್ಕೆ 77 ಕೋಟಿ ರೂ. ಹಾಗೂ 33 ಉದ್ಯಾನವನಗಳ ಅಭಿವೃದ್ಧಿಗೆ 23 ಕೋಟಿ ರೂ.ಗಳನ್ನು ಅಮೃತ್-2 ಅಡಿಯಲ್ಲಿ ಮಂಜೂರು ಮಾಡಲಾಗಿದ್ದು, ಇದನ್ನು ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಕಾಸಸೌಧದ 422ನೇ ಕೊಠಡಿಯಲ್ಲಿಂದು ಪೌರಾಡಳಿತ ಸಚಿವ ರಹೀಂ ಖಾನ್ ಅವರೊಂದಿಗೆ ಬೀದರ್ ಜಿಲ್ಲೆಯ ಕೆರೆಗಳ ಪುನಶ್ಚೇತನ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು ತ್ವರಿತವಾಗಿ ಈ ಎಲ್ಲ ಕಾಮಗಾರಿ ಆರಂಭಿಸುವಂತೆ ತಿಳಿಸಿದರು.
ಈ ಬಾರಿಯ ವನಮಹೋತ್ಸವದ ವೇಳೆ ಬೀದರ್ ಹವಾಮಾನಕ್ಕೆ ಹೊಂದಿಕೊಳ್ಳುವಂತಹ ಸ್ಥಳೀಯ ಪ್ರಭೇದದ ಗಿಡಗಳನ್ನು ನೆಟ್ಟು ಬೆಳೆಸುವಂತೆ ಎತ್ತರದ ಸಸಿಗಳನ್ನು ನೆಟ್ಟರೆ ಅವು ಹೆಚ್ಚಿನ ಪ್ರಮಾಣದಲ್ಲಿ ಬದುಕಿ ಉಳಿಯುತ್ತವೆ ಹೀಗಾಗಿ ಈ ಬಾರಿ ಎತ್ತರದ ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಿದರು.

ಉದ್ಯಾನದಲ್ಲಿ ಪುತ್ಥಳಿಗೆ ಅವಕಾಶವಿಲ್ಲ: ಯಾವುದೇ ಉದ್ಯಾನವನ ಪ್ರದೇಶದಲ್ಲಿ ಅನಧಿಕೃತವಾಗಿ ಯಾವುದೇ ಪುತ್ಥಳಿಯನ್ನು ಸ್ಥಾಪಿಸಲು ಅಥವಾ ದೇವಾಲಯ ನಿರ್ಮಾಣ ಮಾಡಲು ಅವಕಾಶ ನೀಡಬಾರದು. ಉದ್ಯಾನವನಗಳು ಉತ್ತಮ ಶ್ವಾಸ ತಾಣಗಳಾಗಿರಬೇಕು. ಇಲ್ಲಿ ಸ್ಥಳೀಯ ಪ್ರಬೇಧದ ಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.
ಚೈನ್ ಲಿಂಕ್ ಫೆನ್ಸ್ ಹಾಕಲು ಸೂಚನೆ:ಜಿಲ್ಲೆಯಲ್ಲಿರುವ 33 ಉದ್ಯಾನವನಗಳಲ್ಲಿ ಯಾವುದೂ ಒತ್ತುವರಿ ಆಗದಂತೆ ತಡೆಯಲು ಹಾಗೂ ಉದ್ಯಾನದಲ್ಲಿನ ಹೂಗಿಡಗಳನ್ನು ದರಕರುಗಳು ತಿನ್ನದಂತೆ ಕಾಪಾಡಲು ಗಟ್ಟಿಮುಟ್ಟಾದ ತಂತಿಬೇಲಿ ಹಾಕುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು.
ಮಕ್ಕಳ ಆಟಿಕೆ ಅಳವಡಿಕೆಗೂ ಸೂಚನೆ:ನಗರ, ಪಟ್ಟಣದ ಉದ್ಯಾನವನಗಳನ್ನು ವಿಶ್ವದರ್ಜೆಯ ಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಬೇಕು, ಮಕ್ಕಳ ಆಟಿಕೆಗಳನ್ನು ಅಳವಡಿಸಿ, ನಿರ್ವಹಣೆ ಮಾಡಬೇಕು ಮತ್ತು ಅಲ್ಲಿರುವ ವೃಕ್ಷಗಳ ಮೇಲೆ ಅವುಗಳ ಪ್ರಭೇದ, ವೈಶಿಷ್ಟ್ಯದ ಫಲಕ ಹಾಕಿ ಮಕ್ಕಳಿಗೆ ಪ್ರಕೃತಿ, ಪರಿಸರದ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕೆರೆಗಳ ಹೂಳು ತೆಗೆಯಲು ಸೂಚನೆ: ಕೆರೆಗಳ ಸ್ವಚ್ಛತೆ ಅತಿ ಮುಖ್ಯವಾಗಿದೆ. ಕೆರೆಗಳಿಗೆ ತ್ಯಾಜ್ಯ ಜಲ ಸೇರಿದರೆ ಜನ, ಜಾನುವಾರಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳು ಸಾವಿಗೀಡಾಗುತ್ತವೆ. ಹೀಗಾಗಿ ಜಿಲ್ಲೆಯ ಎಲ್ಲ 29 ಕೆರೆಗಳ ಹೂಳು ತೆಗೆಯುವಂತೆ ಮತ್ತು ಕೆರೆಗೆ ಸಂಸ್ಕರಣೆ ಆಗದ ತ್ಯಾಜ್ಯ ಜಲ ಹರಿಯಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಎಸ್.ಟಿ.ಪಿ. ಸ್ಥಾಪನೆ: ನಗರ, ಪಟ್ಟಣಕ್ಕೆ ಹೊಂದಿಕೊಂಡಿರುವ ಕೆರೆಗಳ ಬಳಿ ತ್ಯಾಜ್ಯ ಜಲ ಸಂಸ್ಕರಣಾ ಘಟಕ (ಎಸ್.ಟಿ.ಪಿ.) ಸ್ಥಾಪಿಸಿ, ಜಲ ಶುದ್ಧೀಕರಣವಾದ ಬಳಿಕವμÉ್ಟೀ ಕೆರೆಗೆ ಹರಿಸಬೇಕು. ಇದಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಎಂದು ಈಶ್ವರ ಖಂಡ್ರೆ ಸೂಚನೆ ನೀಡಿದರು.

ಈಗಾಗಲೇ ಸ್ಥಾಪಿಸಲಾಗಿರುವ ಎಸ್.ಟಿ.ಪಿ.ಗಳು ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸೂಚಿಸಿದ ಅವರು, ಜಲ ಮೂಲಗಳ ನಿಯಮಿತ ಪರಿಶೀಲನೆ ನಡೆಸುವಂತೆಯೂ ತಿಳಿಸಿದರು.
ಭಾಲ್ಕಿಯ ಮಾಸೂಂಪಾಶಾ ಕಾಲೋನಿಯಲ್ಲಿರುವ 8 ಎಕರೆ ಕೆರೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಏರಿ ನಿರ್ಮಾಣ ಮಾಡಲು ಸೂಚನೆ ನೀಡಿದರು.
ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಪೌರಾಡಳಿತ ಇಲಾಖೆ ನಿರ್ದೇಶಕ ಪ್ರಭುಲಿಂಗ್ ಕವಳಿಕಟ್ಟಿ ಮತ್ತು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
*****