ಕಮಲನಗರ : ವಿಶ್ವದಲ್ಲಿ ಪ್ರಜಾಪ್ರಭುತ್ವ ತಳಹದಿಯೇ ಬಸವಣ್ಣ. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಬಸವಕಲ್ಯಾಣದ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಬಳತ (ಬಿ) ಗ್ರಾಮದಲ್ಲಿ ಗುರುವಾರ ಸಂಜೆ ನಡೆದ ಪ್ರವಚನ ಸಮಾರೋಪ ವಿಶ್ವಗುರು ಬಸವಣ್ಣನವರ 892ನೇ ಬಸವ ಜಯಂತಿ ಉತ್ಸವ ಹಾಗೂ ರಾಷ್ಟç ಭಕ್ತಿ ಕುರಿತು ಜೈಜವಾನ ರೂಪಕ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಬಸವಣ್ಣ ಜಾತಿ, ಧರ್ಮ, ಮತಭೇದವನ್ನು ಮರೆತು ಮನುಷ್ಯ ಜಾತಿಯನ್ನು ಒಗ್ಗೂಡಿಸಿ ಎಲ್ಲರನ್ನೂ ಒಂದೇ ಎಂಬ ಸಂದೇಶ ಸಾರಿದರು. ವಿಶ್ವದಲ್ಲಿ 800 ವರ್ಷಗಳ ಹಿಂದೆಯೇ ಶೋಷಿತರ, ಮಹಿಳೆಯರ, ಜಾತಿ ವರ್ಣಭೇದ ವಿರುದ್ಧ ಧ್ವನಿ ಎತ್ತಿ ಅದರ ಹೋರಾಟ ಮಾಡಿದ್ದರು. ಅನುಭವ ಮಂಟಪ ಎಂಬ ಸಂಸತ್ ರಚನೆ ಮಾಡಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಬಸವಣ್ಣ ಇಂದಿಗೂ ಪ್ರಸ್ತುತರಾಗುತ್ತಾರೆ. ಇಂತಹ ವ್ಯಕ್ತಿ ನಮ್ಮ ಭಾಗದಲ್ಲಿ ನಡೆದಾಡಿರುವುದು ನಮ್ಮೆಲ್ಲರ ಪುಣ್ಯವಾಗಿದ್ದು, ಇವರ ತತ್ವದರ್ಶಗಳ ಅನುಕರಣೆ ನಮಗೆ ಪ್ರಸ್ತುತವಾಗುತ್ತದೆ ಎಂದರು.
ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಣ್ಣ ಇವತ್ತು ವಿಶ್ವಕ್ಕೆ ಅರ್ಥವಾಗದೇ ಇರಬಹುದು. ಇನ್ನು ಕೆಲ ವರ್ಷಗಳ ಬಳಿಕವಾದರೂ ಜಗತ್ತಿಗೆ ಅರ್ಥವಾಗಲಿದೆ. ಆಗ ಎಲ್ಲರೂ ಬಸವಣ್ಣನಿಗೆ ಪೂಜಿಸುವರು. ಈಗಾಗಲೇ ಅನೇಕ ದೇಶಗಳಲ್ಲಿ ಹಲವು ಭಾಷೆಗಳಿಗೆ ವಚನ ಸಂಪುಟ ಅನುವಾದಗೊಂಡಿದೆ. ವಿಶ್ವದ ನಾನಾ ಕಡೆಗಳಲ್ಲಿ ಬಸವ ಜಯಂತಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಮಕ್ಕಳಿಗೆ ಬಸವಣ್ಣನ ವಚನಗಳು ಕಲಿಸಿ ಬದುಕಿನ ಪಾಠ ಕಲಿಸುವ ಅಗತ್ಯವಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಅಮರನಾಥ ಆರ್ ತಳವಾಡೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ಮುಖ್ಯಗುರು ವೈಜಿನಾಥ ರಾಜಗೀರೆ ಅಧ್ಯಕ್ಷತೆ ವಹಿಸಿದರು. ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಡಾ. ಸಂಜೀವಕುಮಾರ ಜುಮ್ಮಾ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪತ್ರಕರ್ತ ಸಂಘದ ಅಧ್ಯಕ್ಷ ಶಿವಾನಂದ ಮೊಕ್ತೆದಾರ್, ಕಲಬುರಗಿ ವಿವಿ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ವಚನ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಮಹಾದೇವ ಮಡಿವಾಳ, ಶಿಖರೇಶ್ವರ ಶೆಟಕಾರ, ಸಿದ್ರಾಮ ತಳವಾಡೆ, ಗುಂಡಪ್ಪ ಮರ್ಚಾಪೂರೆ, ಶಿವಾನಂದ ಸಾವಳೆ ಸೇರಿದಂತೆ ಅನೇಕರು ಪಾಲ್ಗೊಂಡರು. ಸಂಗಮೇಶ ಸಾವಳೆ ಸ್ವಾಗತಿಸಿದರು. ದಶರಥ ಔರಾದೆ ನಿರೂಪಿಸಿದರು. ಜಗನ್ನಾಥ ಬಿರಾದಾರ್ ವಂದಿಸಿದರು. ಈ ವೇಳೆ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯಿತು.
ಸೇವಾ ನಿವೃತ್ತರಿಗೆ ಸತ್ಕಾರ
ಈ ವೇಳೆ ಗ್ರಾಮದ ಸರಕಾರಿ ನಿವೃತ್ತ ನೌಕರರಿಗೆ ಗ್ರಾಮಸ್ಥರು ಸತ್ಕರಿಸುವ ಮೂಲಕ ಗಮನ ಸೆಳೆದರು. ಗ್ರಾಮದಲ್ಲಿ ವಿಜ್ಞಾನಿಗಳು, ಐಎಎಸ್, ಐಪಿಎಸ್ ಸೇರಿದಂತೆ ಬಹುತೇಕ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಈ ವೇಳೆ ಸತ್ಕರಿಸಿರುವುದು ಸಂತಸ ತಂದಿದೆ ಎಂದು ಗುರುಬಸವ ಪಟ್ಟದ್ದೇವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗಮನ ಸೆಳೆದ ರೂಪಕ
ಭಾಲ್ಕಿಯ ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿಗಳಿಂದ ಇಳಕಲ್ ಶ್ರೀಗಳ ರಚಿಸಿರುವ ರಾಷ್ಟç ಭಕ್ತಿ ಕುರಿತು ಜೈ ಜವಾನ್ ರೂಪಕ ಎಲ್ಲರ ಗಮನ ಸೆಳೆಯಿತು. ಧರ್ಮದ ಆಚರಣೆ ಮಾಡೋಣ ಆದರೆ ದೇಶದ ವಿಚಾರ ಬಂದರೆ ಧರ್ಮಕ್ಕಿಂತ ದೇಶ ದೊಡ್ಡದು. ಯುವಕರು ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದು ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.