ಕೆ.ಯು.ಡಬ್ಲ್ಯೂ.ಜೆ ಜಿಲ್ಲಾ ಘಟಕದಿಂದ ಜರುಗಿದ ವಾರ್ಷಿಕ ಸಾಮಾನ್ಯ ಸಭೆ
ಬೀದರ್: ಪತ್ರಕರ್ತರ ಆರೋಗ್ಯ ರಕ್ಷಣೆ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ತಿಳಿಸಿದರು.
ಭಾನುವಾರ ಮಧ್ಯಾಹ್ನ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ 2024-25ನೇ ಸಾಲಿನ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಪತ್ರಕರ್ತರಿಗೆ ಆರೋಗ್ಯ ಸಮಸ್ಯೆ ಆದಲ್ಲಿ ಬಿ.ಬಿ.ಎಂ.ಪಿ ಹಾಗೂ ಇತರೆ ಜಿಲ್ಲೆಗಳ ನಗರ ಸಭೆ, ಪುರಸಭೆಗಳ ಮಾದರಿಯಲ್ಲಿ ನಮ್ಮ ಜಿಲ್ಲೆಯ ನಗರ, ಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಿಗೆ ಮನವಿ ಸಲ್ಲಿಸಲಾಗುವುದು. ಪತ್ರಕರ್ತರಿಗೆ ಆರ್ಥಿಕ ವಿಮೆ ಜೊತೆಗೆ ನಿವೇಶನ ಹಂಚಿಕೆಯಲ್ಲೂ ಪತ್ರಕರ್ತರಿಗೆ ಶೇಕಡಾ ೩ ಪ್ರತಿಶತ ಮೀಸಲಾತಿ ಕಲ್ಪಿಸಲು ಸಹ ಒತ್ತಾಯಿಸಲಾಗುತ್ತದೆ ಎಂದರು.
ಪತ್ರಕರ್ತರಿಗೆ ಇ.ಎಸ್.ಐ ಕಾರ್ಡ್ ಮಾದರಿಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಆರೋಗ್ಯ ಸಂಜಿವಿನಿ ಯೋಜನೆ ಜಾರಿಗೊಳಿಸಿದೆ. ಅದನ್ನು ಸಂಘದ ಎಲ್ಲ ಸದಸ್ಯರಿಗೆ ವಿಸ್ತರಿಸಲು ರಾಜ್ಯ ಸಂಘದ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ಸೌಲಭ್ಯ ರಾಜ್ಯ ಸರ್ಕಾರ ಘೋಷಿಸಿದ್ದರೂ ಅದನ್ನು ಸರಳಿಕರಿಸಿ ಬೇಗ ಪಾಸ್ ಸೌಲಭ್ಯ ಪತ್ರಕರ್ತರಿಗೆ ಸಿಗಲು ರಾಜ್ಯ ಸಂಘದ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಬೇಡಿಕೆ ಸಲ್ಲಿಸಲಾಗುವುದು. ಇಲ್ಲದೇ ಮಹಿಳೆಯರಿಗೆ ಉಚಿತವಾಗಿ ನೀಡುತ್ತಿರುವ ಪ್ರಯಾಣ ಮಾದರಿಯನ್ನು ಪತ್ರಕರ್ತರಿಗೆ ವಿಸ್ತರಿಸಬೇಕು, ಆಧಾರ ಕಾರ್ಡ್ ತೋರಿಸಿ ಪ್ರಯಾಣಿಕರು ಬಸ್ಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಕಲ್ಪಿಸುವಂತೆ ಸರ್ಕಾರದ ಗಮನ ಸೆಳೆಯಲಾಗುವುದೆಂದು ತಿಳಿಸಿದರು.

ಈಗಾಗಲೇ ರಾಜ್ಯದ ಪತ್ರಕರ್ತರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಆಪತ್ಭಾಂಧವ ಆ್ಯಪ್ ಮಾದರಿಯಲ್ಲಿ ಸ್ಥಳಿಯವಾಗಿ ಜಿಲ್ಲೆಯ ಪತ್ರಕರ್ತರನ್ನು ಅದರಲ್ಲಿ ಸೇರಿಸಿ ತಿಂಗಳಿಗೆ ಒಂದು ನೂರು ರೂಪಾಯಿ ಸಂಗ್ರಹಿಸಿ ಆ ತಿಂಗಳಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಇರುವವರಿಗೆ ಸಂಗ್ರಹಿಸಿದ ಹಣವನ್ನು ನೀಡುವ ಉದ್ದೇಶ ಹೊಂದಿದ್ದೇವೆ. ಮೇ.೧ರಂದೇ ಕಾರ್ಮಿಕ ದಿನಾಚರಣೆ ದಿವಸ ಅದಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಡಲಾಗುತ್ತದೆ ಎಂದರು.
ಜಿಲ್ಲಾಡಳಿತದಿಂದ ಜರುಗುವ ಸನ್ಮಾನಕ್ಕೆ ತಾಲೂಕಿನ ಹಿರಿಯ ಪತ್ರಕರ್ತರನ್ನು ಗುರ್ತಿಸಲು ಹಾಗೂ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಸ್ಥಳಿಯ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿ ನೀಡಲು ಸಹ ಸಂಘ ರಾಜ್ಯ ಸಂಘಕ್ಕೆ ಶಿಫಾರಸ್ಸು ಮಾಡಲಾಗುವುದು. ಕಮಲನಗರದ ಪತ್ರಕರ್ತರು ಒಮ್ಮತದ ಅಭಿಪ್ರಾಯಕ್ಕೆ ಬಂದರೆ ಕೂಡಲೇ ಅಲ್ಲಿ ಹಂಗಾಮಿ ಅಧ್ಯಕ್ಷರ ನೇಮಕ ಮಾಡುವುದಾಗಿ ಭರವಸೆ ನೀಡಿದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟಿಯ ಮಂಡಳಿ ಸದಸ್ಯರಾದ ಅಪ್ಪಾರಾವ ಸೌದಿ ಈ ಸಂದರ್ಭದಲ್ಲಿ ಮಾತನಾಡಿ, ಪತ್ರಕರ್ತರು ಪ್ರತಿ ತಿಂಗಳು ಲೈನೆಜ್ಗಾಗಿ ಬೇಡಿಕೆ ಇಡದ ಕಾರಣ ಅವರಿಗೆ ಸ್ಯಾಲರಿ ಸರ್ಟಿಫಿಕೆಟ್ ಕೊಡಲು ಸಾಧ್ಯವಾಗುತ್ತಿಲ್ಲ. ಈಲ್ಲಾ ಮಟ್ಟದ ಪತ್ರಿಕೆಗಳಿಗೆ ಸಹ ಈ ವಿಷಯದ ತೊಂದರೆ ಇದ್ದು ಸರ್ಕಾರ ಈ ನಿಯಮ ಸಡಲಿಸಿದರೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಸಿಗಲು ಅನುಕುಲ ಆಗಲಿದೆ ಎಂದರು.

ಹಿರಿಯ ಪತ್ರಕರ್ತರಾದ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ಪ್ರತಿ ತಿಂಗಳು ಒಂದಾದರೂ ವಿಚಾರ ಸಂಕಿರಣ ಹಮ್ಮಿಕೊಂಡರೆ ಪತ್ರಕರ್ತರಿಗೆ ಅವರ ಹಕ್ಕು ಬಾಧ್ಯತೆ ಹಾಗೂ ಜವಾಬ್ದಾರಿ ಬಗ್ಗೆ ಮನವರಿಕೆ ಮಾಡಿಕೊಡಲು ಸಾಧ್ಯ ಆಗಲಿದೆ ಎಂದರು.
ತಾಲೂಕು ಪದಾಧಿಕಾರಿಗಳಾದ ದುರ್ಯೋಧನ ಹೂಗಾರ, ಎಸ್.ಎಸ್ ಮೈನಾಳೆ, ಗಣಪತಿ ಬೋಚರೆ, ಚಂದ್ರಕಾಂತ ಗಳಗೆ, ಸಂಜಯ ದಂತಕಾಳೆ ಹಾಗೂ ಇತರೆ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಸವರಾಜ ಕಾಮಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ ಚೌದ್ರಿ, ನಾಗಶೆಟ್ಟಿ ಧರಂಪುರ, ಅಬ್ದುಲ್ ಅಲಿ, ಖಜಾಂಚಿ ಎಂ.ಪಿ ಮುದಾಳೆ ವೇದಿಕೆಯಲ್ಲಿದ್ದರು. ಕಾರ್ಯದರ್ಶಿಗಳಾದ ಪ್ರಥ್ವಿರಾಜ್.ಎಸ್ ಹಾಗೂ ಸುನಿಲಕುಮಾರ ಕುಲಕರ್ಣಿ ವರದಿ ಎರಡು ವರ್ಷದ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಎರಡು ವರ್ಷದ ಆಯವ್ಯಯ ಮಂಡಿಸಿದರು. ನಂತರ 2025-26ನೇ ಸಾಲಿನ ಸಂಘದ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಂಘದ ಎಲ್ಲ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರು, ಎಲ್ಲ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಇತರೆ ಸದಸ್ಯರು ಸೇರಿದಂತೆ 150ಕ್ಕೂ ಅಧಿಕ ಪತ್ರಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು. ಎಲ್ಲ ಪದಾಧಿಕಾರಿಗಳು, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರು, ಜಿಲ್ಲಾ ಕಾರ್ಯಕಾರಣಿ ಸದಸ್ಯರು, ಐ.ಎಫ್.ಡಬ್ಲ್ಯೂಜೆ ರಾ.ಮ ಸದಸ್ಯರು ಭಾಗವಹಿಸಿದ್ದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
———————–