ಬೀದರ್ : ನಮ್ಮ ದೇಶದ ಸಾಂಸ್ಕೃತಿಕ ವೈಭವದಲ್ಲಿ, ಜನಜೀವನದಲ್ಲಿ, ಅಭಿವೃದ್ಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಜನಾಂಗಗಳ ಕೊಡುಗೆ ಸ್ಮರಣೀಯವಾದುದಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ.ಜಿ ಹೇಳಿದರು.
ಅವರು ಬೀದರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿದ್ದು ಹಮ್ಮಿಕೊಂಡಿದ್ದ ‘ಬೀದರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು’ ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾವಂತರಾದವರು ತಳವರ್ಗದ, ಅಲೆಮಾರಿಗಳ ಚಿಂತನೆ ಮಾಡಬೇಕು. ಧ್ವನಿಯಿಲ್ಲದವರಿಗೆ ಅವಕಾಶ ವಂಚಿತರಿಗೆ ಅವಕಾಶ ನೀಡುವ ಮನಸ್ಸು ಮಾಡಬೇಕು. ಸಮಾಜ ಕಲ್ಯಾಣವೆಂದರೆ ಜನರ ಕಲ್ಯಾಣ, ಸಮುದಾಯದ ಕಲ್ಯಾಣ. ಹೀಗಾಗಿ ಮೂಲನಿವಾಸಿಗಳಾದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲೆಮಾರಿಗಳ ಕುರಿತು ಅಧ್ಯಯನ ಕೈಗೊಂಡು ಅವರ ವಾಸ್ತವ ಬದುಕಿನ ಬಗ್ಗೆ ಬೆಳಕು ಚೆಲ್ಲಬೇಕಾದ ಅವಶ್ಯಕತೆಯಿದೆ ಎಂದರು.

ವಿಶೇಷ ಉಪನ್ಯಾಸಕರಾಗಿದ್ದ ಬಿ.ಎಸ್.ಆನಂದಕುಮಾರÀ ಏಕಲವ್ಯ ಅವರು ಮಾತನಾಡಿ, ಅಲೆಮಾರಿಗಳು ಸಾರ್ಥಕ ಬದುಕಿನ ನಿಜವಾದ ರೂವಾರಿಗಳು. ನಾಳಿನ ಬದುಕಿಗಾಗಿ, ಸ್ವಚ್ಛ ಭಾರತದ ನಿಜವಾದ ನಾಗರೀಕರು. ಅವರು ತಮ್ಮ ಉಪಜೀವನಕ್ಕಾಗಿ ಹಾವು, ಕೋತಿ, ಕರಡಿ ಆಡುಸುತ್ತಾ ಸಮಾಜದ ಸ್ವಾಸ್ಥö್ಯಕ್ಕಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸುವ ಪ್ರಾಂಜಲಭಾವದ ಕಾಯಕಜೀವಿಗಳು. ಅವರು ಸ್ವಂತ ಸೂರಿಲ್ಲದೇ ನಿರಂತರ ಸಂಚರಿಸಿ ತಾವು ಪಟ್ಟ ಪಾಡೇ ದೇಶಕ್ಕೆ ಹಾಡಾಗಿಸಿದರು. ಅತ್ಯಂತ ಕಠಿಣ ಕೆಲಸಗಳನ್ನು ಈ ಅಲೆಮಾರಿ, ಬುಡಕಟಡ್ಟು ಜನಾಂಗದಿAದಲೇ ಅಂದಿನ ಆಡಳಿತವರ್ಗ ಮಾಡಿಸಿತು. ಅಲೆಮಾರಿಗಳು ಪ್ರಕೃತಿಯ ಆರಾಧಕರು. ಪ್ರಕೃತಿಯೊಂದಿಗೆ ಮಾತಾಡುವವರು. ಅರಣ್ಯದ ಹಕ್ಕನ್ನು ನಿಷೇಧ ಮಾಡಿದಾಗ ಅವರು ಅರಣ್ಯವನ್ನು ತೊರೆದು ದೊಂಬರಾಟ, ದುರುಗಮುರುಗಿ ಮುಂತಾದ ಕಾಯಕದಲ್ಲಿ ತಮ್ಮನ್ನು ಗುರುತಿಸಿಕೊಂಡು ಬಾಳಿದರು. ಇಂದು ಅಲೆಮಾರಿ ಬದುಕು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಮೂರಾಬಟ್ಟೆಯಾಗಿದೆ. ಅವರು ತಯಾರಿಸುವ ವಸ್ತುಗಳ ಸ್ಥಾನದಲ್ಲಿ ಇಂದು ಪ್ಲಾಸ್ಟಿಕ್, ಎಲೆಕ್ಟಾçನಿಕ್ ವಸ್ತುಗಳು ಆವರಿಸಿವೆ. ಹೀಗಾಗಿ ಅಲೆಮಾರಿಗಳ ಅಭಿವೃದ್ಧಿ, ಅವರ ಬದುಕು ಕಟ್ಟಿಕೊಡುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ, ಸಹಕಾರಿಯಾಗಬೇಕೆಂದರು.

ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರರವರು ಮಾತನಾಡಿ, ಅಲೆಮಾರಿ ಜನಾಂಗ ಧ್ವನಿಯಿಲ್ಲದ, ಶಕ್ತಿಯಿಲ್ಲದ ಜನಾಂಗ. ಬಡವರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂದಿಗೂ ನಿರ್ಲಕ್ಷಕ್ಕೊಳಗಾದ ಅಲೆಮಾರಿ ಸಮುದಾಯ ನಿರಂತರ ಸಂಚಾರದಿAದಾಗಿ ಜನಸಂಖ್ಯಾ ಗಣತಿಯಲ್ಲಿ, ಆಧಾರನಲ್ಲಿಯೂ ಅಡ್ರೆಸ್ ಸಿಗದಷ್ಟು ನತದೃಷ್ಟರಾಗಿದ್ದಾರೆ. ಅವರ ಜೀವನ ನಿಜವಾಗಿಯೂ ಶೋಚನೀಯ. ಅವರು ಸಂಜೆ ನಾಳೆಯ ಹೊಟ್ಟೆಪಾಡಿಗಾಗಿ ಹುಡುಕಾಡುತ್ತಿರುವ ಅತ್ಯಂತ ಕಷ್ಟದ ಬದುಕನ್ನು ಹೊಂದಿದವರಾಗಿದ್ದಾರೆ. ಅಂತಹ ನಿರ್ಲಕ್ಷಿತರ ಸಬಲೀಕರಣಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.
ಬೀದರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಸುರೇಖಾ ಕೆ.ಎ.ಎಸ್. ಮಾತನಾಡಿ, ದೇಶದ ಉದ್ಧಾರವೆಂದರೆ ಎಲ್ಲರ ಜೀವನಮಟ್ಟ ಸುಧಾರಣೆಯಾಗಬೇಕು. ಅಲೆಮಾರಿಗಳ, ತಳವರ್ಗದ ಜನರೆಲ್ಲ ಮುಖ್ಯವಾಹಿನಿಗೆ ತರಬೇಕಾದ ಅವಶ್ಯಕತೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಬೀದರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀನಾಗಭೂಷಣ ಕಮಠಾಣೆ, ಶಾಂತಲಿAಗ ಸಾವಳಗಿ, ಸಚಿನ್ ಶಿವರಾಜ, ವಿಠ್ಠಲದಾಸ ಪ್ಯಾಗೆ, ಅಬ್ದುಲ್ ಸತ್ತಾರಸಾಬ, ವೈಷ್ಣವಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಸಿಂಧು, ಬೀದರ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಪರಮೇಶ್ವರನಾಯ್ಕ.ಟಿ., ಬೀದರ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾದ ಡಾ.ರವೀಂದ್ರನಾಥ ವಿ.ಗಬಾಡಿ, ಬೀದರ ಹಾಗೂ ವಿವಿಧ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
*****