ಮನ್ನಳ್ಳಿ : ಯುವ ಸೌರಭ ಯುವ ಪ್ರತಿಭೆಗಳ ಸಡಗರ…!
ಜಿಲ್ಲೆಯ ಮಕ್ಕಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಶ್ಲಾಘನಿಯ ಕಾರ್ಯ – ಸೋಮಶೇಖರ್ ಬಿರಾದಾರ್
ಬೀದರ್ : ನಮ್ಮ ಜಿಲ್ಲೆಯಲ್ಲಿ ಯುವ ಕಲಾವಿದರು ಕಡಿಮೆ ಇಲ್ಲ. ಪ್ರತಿ ಹಳ್ಳಿಯಿಂದಲೂ, ಪ್ರತಿಯೊಂದು ಶಾಲೆ ಕಾಲೇಜುಗಳಿಂದಲೂ, ಪ್ರತಿಭಾವಂತರನ್ನು ಕಾಣಬಹುದು. ಸಂಗೀತ, ನೃತ್ಯ, ನಾಟಕ, ಚಿತ್ರಕಲೆ, ಕ್ರೀಡೆ ಅಥವಾ ಸಾಹಿತ್ಯ ಯಾವ ಕ್ಷೇತ್ರವನ್ನೇ ತೆಗೆದುಕೊಂಡರು ನಮ್ಮ ಜಿಲ್ಲೆಯ ಮಕ್ಕಳು ತಮ್ಮ ಕಲೆ ಪ್ರತಿಭೆ ಶ್ರಮದಿಂದ ರಾಜ್ಯ, ರಾಷ್ಟç ಮಟ್ಟದಲ್ಲಿಯೂ ಹೆಸರು ಮಾಡುತ್ತಿದ್ದಾರೆ. ಅವರ ಸಾಧನೆಗಳನ್ನು ನೋಡಿದಾಗ ನಿಜಕ್ಕೂ ನಮ್ಮ ಹೃದಯದಲ್ಲಿ ಹೆಮ್ಮೆ ಮೂಡುತ್ತದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಿರಾದಾರ್ ಅವರು ಶ್ಲಾಘನಿಸಿದರು.
ಅವರು ಇಂದು ಬೀದರ ತಾಲೂಕಿನ ಮನ್ನಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ (ಪದವಿ ಪೂರ್ವ ಕಾಲೇಜು) ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ 2025-26ನೇ ಸಾಲಿನ ಯುವ ಸೌರಭ, ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮವು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಇಂದಿನ ಯುವ ಪೀಳಿಗೆಗೆ ಬೇಕಾದ ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹ ಸಿಕ್ಕರೆ ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ. ಜಿಲ್ಲೆಯ ಮಕ್ಕಳಲ್ಲಿ ಇರುವ ಕಲಾತ್ಮಕ ಶಕ್ತಿ ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗಿರದೆ, ನಮ್ಮ ಜಿಲ್ಲೆಯ ಹೆಸರನ್ನೂ ರಾಜ್ಯ, ರಾಷ್ಟç ಮಟ್ಟದಲ್ಲಿ ಬೆಳಗಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಮತ್ತು ಸಮಾಜವು ಇವರಿಗೆ ಬೆಂಬಲವಾಗಿ ನಿಲ್ಲಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಲು ಸರ್ಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹೆಚ್ಚು ಹೆಚ್ಚು ಮುಂದೆ ಬಂದು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಮನ್ನಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪ-ನಿರೀಕ್ಷಕರಾದ ಶ್ರೀಮತಿ ನಂದಿನಿ ಅವರು ಮಾತನಾಡಿ, ಕನ್ನಡ ಭಾಷೆ ಕೇವಲ ಮಾತಿನ ಮಾಧ್ಯಮವಲ್ಲ, ಇದು ನಮ್ಮ ಸಂಸ್ಕೃತಿ, ನಮ್ಮ ಅಸ್ತಿತ್ವ, ನಮ್ಮ ಹೆಮ್ಮೆ. ಜನರೊಂದಿಗೆ ಕೆಲಸ ಮಾಡುವಾಗ ಕನ್ನಡದಲ್ಲಿ ಮಾತನಾಡಿದರೆ ಆತ್ಮೀಯತೆ ಹೆಚ್ಚುತ್ತದೆ, ವಿಶ್ವಾಸ ಮೂಡುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮಾತು ಕತೆ, ಕೆಲಸಗಳಲ್ಲಿ ಕನ್ನಡವನ್ನು ಮೊದಲ ಸ್ಥಾನದಲ್ಲಿ ಇರಿಸಿಕೊಳ್ಳಬೇಕೆಂದರು.
ಮನ್ನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕಾಶಿಬಾಯಿ ಬಕ್ಕಪ್ಪಾ ಲಾಲಚಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಅಬ್ದುಲ್ ಸಮದ ಷಾ, ಮಾಜಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಶೇಖರ ಮಳಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ್ ಸಿಂಧೆ, ಕಾಲೇಜಿನ ಪ್ರಾಂಶುಪಾಲರಾದ ಮಾರುತಿ ರೆಡ್ಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕನಕರಾಯ, ಸರಿಗಮಪ ವಿಜೆತೆ ಶಿವಾನಿ ಶಿವದಾಸ್, ಶಾಂತರಸ, ವಿಜಯಕುಮಾರ್ ದೇವಾ, ಇತರರು ವೇದಿಕೆ ಮೇಲಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ದಿಲೀಪ ಕಾಡವಾದ ತಂಡದಿಂದ ಜಾನಪದ ಗಾಯನ, ಮಾನಸ ಪಾಂಚಾಳ್ ತಂಡದಿಂದ ಸುಗಮ ಸಂಗೀತ, ಕು ಸ್ನೇಹಾ ತಂಡದಿಂದ ಸುಗಮ ಸಂಗೀತ, ಕು ನಿಶಿತಾ ತಂಡದಿಂದ ನೃತ್ಯ ರೂಪಕ, ಕು ಶ್ವೇತಾ ತಂಡದಿಂದ ಕೋಲಾಟ, ಕು.ಪ್ರಗತಿ ತಂಡದಿಂದ ಕಮಸಾಳೆ, ಆಕಾಶ ತಂಡದಿಂದ ಜಾನಪದ ಗಾಯನ ಹಾಗೂ ಜೆಸ್ಸಿ ತಂಡದವರಿಂದ ಜಾನಪದ ಗೀತೆ, ಮತ್ತು ವಿವಿಧ ಕಲಾ ತಂಡದವರಿಂದ ನೃತ್ಯ, ಭಾವಗೀತೆ, ನಾಟಕ ಹಾಗೂ ಹಾಸ್ಯ ಪ್ರಹಸನ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು.

ಸರಿಗಮಪ ಸಿಜೆನ್ 21ರ ವಿಜೆತೆ ಕು.ಶಿವಾನಿ ಶಿವದಾಸ್ ಅವರ ಜಾನಪದ ಗಾಯನ ಕಾರ್ಯಕ್ರಮದ ವೇದಿಕೆಗೆ ಅವರು ಕಾಲಿಟ್ಟ ಕೂಡಲೇ ಪ್ರೇಕ್ಷಕರಿಂದ ಭಾರಿ ಚಪ್ಪಾಳೆ ಸದ್ದು ಮೊಳಗಿತು. ಕನ್ನಡ ಜಾನಪದ ಗೀತೆಗಳ ರಸಮಂಜರಿಯನ್ನು ಅವರು ತಮ್ಮ ಮಧುರ ಧ್ವನಿಯಲ್ಲಿ ಕೇಳಿ ಮಕ್ಕಳು ಸಂತೋಷ ಪಟ್ಟರು.
ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ, ಸ್ವಾಗತಿಸಿದರು, ದೇವಿದಾಸ್ ಜೋಶಿ ನಿರೂಪಿಸಿದರೇ, ಕು. ಕ್ಲಾಮೆಂಟಿನಾ ವಂದಿಸಿದರು. ಕಾಲೇಜಿನ ಮಕ್ಕಳು, ಸಿಬ್ಬಂದಿಗಳು, ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
—————–
