ಪ್ರಾಂತ ಕಾರ್ಯದರ್ಶಿ ಬೋಳಶೆಟ್ಟಿ ನೇತೃತ್ವದಲ್ಲಿ ಬೈಠಕ್ ನೂತನ ಪದಾಧಿಕಾರಿ ಘೋಷಣೆ
—–
ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷರಾಗಿ
ವೀರಶೆಟ್ಟಿ ಖ್ಯಾಮಾ ಆಯ್ಕೆ
ಬೀದರ್:ವಿಶ್ವ ಹಿಂದು ಪರಿಷದ್ (ವಿಎಚ್ ಪಿ) ಬೀದರ್ ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಹಿಂದುಪರ ಸಂಘಟನೆ ಯುವ ಮುಖಂಡ ವೀರಶೆಟ್ಟಿ ಖ್ಯಾಮಾ ಅವರನ್ನು ನೇಮಕ ಮಾಡಲಾಗಿದೆ.
ಸೋಮವಾರ ನಗರದ ದೇವಿ ಕಾಲೋನಿಯ ದೇವಿ ಮಂದಿರ ಸಭಾಂಗಣದಲ್ಲಿ ಪರಿಷದ್ ಉತ್ತರ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ, ವಿಭಾಗ ಕಾರ್ಯದರ್ಶಿ ಅಂಬರೀಶ್ ಸುಲೇಗಾಂವ್ ನೇತೃತ್ವದಲ್ಲಿ ನಡೆದ ಜಿಲ್ಲಾ ಪ್ರಮುಖ ಬೈಠಕ್ ನಲ್ಲಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ಈ ವೇಳೆ ಸರ್ವಸಮ್ಮತವಾಗಿ ವಿಎಚ್ ಪಿ ಜಿಲ್ಲಾ ಸಾರಥ್ಯವನ್ನು ವೀರಶೆಟ್ಟಿ ಖ್ಯಾಮಾ ಅವರ ಹೆಗಲಿಗೆ ವಹಿಸಲಾಯಿತು.
ಇದೇ ವೇಳೆ ಪರಿಷದ್ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ಯುವ ಮುಖಂಡ ಸಂಗಮೇಶ ಗಾದಗಿ ಅವರನ್ನು ನೇಮಿಸಲಾಯಿತು. ರಮೇಶ್ ಕುಲಕರ್ಣಿ ಅವರಿಗೆ ಪ್ರಾಂತ ವಿಶೇಷ ಸಂಪರ್ಕ ಟೋಳಿ ಪ್ರಮುಖ ಹೊಣೆ ವಹಿಸಲಾಯಿತು. ಪರಿಷದ್ ವಿವಿಧ ವಿಭಾಗಗಳಲ್ಲಿ ಡಾ.ವೀರೇಂದ್ರ ಶಾಸ್ತ್ರಿ( ಸೇವಾ ಪ್ರಮುಖ), ರೋಹಿತ್ ಕುಲಕರ್ಣಿ (ಮಂದಿರ ಅರ್ಚಕ, ಪುರೋಹಿತ ಪ್ರಮುಖ), ಹರೀಶ್ ಅಗ್ರಹಾರ (ಸಾಮಾಜಿಕ ಸಾಮರಸ್ಯ ಪ್ರಮುಖ, ಮಹೇಶ ವಿಶ್ವಕರ್ಮ (ಸತ್ಸಂಗ ಪ್ರಮುಖ), ವೀರೇಶ ಚಿದ್ರಿ, (ವಿಶೇಷ ಸಂಪರ್ಕ ಪ್ರಮುಖ), ದತ್ತು ವಾಲ್ದೊಡ್ಡಿ (ಬಜರಂಗ ದಳ ಜಿಲ್ಲಾ ಸಹ ಸಂಯೋಜಕ) ಹೆಸರು ಘೋಷಣೆ ಮಾಡಲಾಯಿತು.
ಈ ವೇಳೆ ಪ್ರಾಂತ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಮಾತನಾಡಿ, ಪರಿಷದ್ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ನೀಡಬೇಕು. ದೇಶ, ಧರ್ಮ, ಸಮಾಜ, ಸಂಸ್ಕೃತಿ ದೃಷ್ಟಿಯಿಂದ ಎಲ್ಲರನ್ನೂ ಸಂಘಟಿಸಿ ಸಮಾಜವನ್ನು ಬಲಪಡಿಸುವ ಕೆಲಸಕ್ಕೆ ಒತ್ತು ನೀಡಬೇಕು. ಪರಿಷದ್ ಮೂಲ ಆಶಯದಂತೆ ಪ್ರತಿಯೊಬ್ಬರೂ ನಿಷ್ಠೆಯಿಂದ ಧರ್ಮ ಕಾರ್ಯಗಳಲ್ಲಿ ಸಕ್ರಿಯವಾಗಬೇಕು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವ ಸಮೂಹ ಸರ್ವ ರೀತಿಯಿಂದಲೂ ಸಜ್ಜಾಗಬೇಕು. ಹಳ್ಳಿ, ಹಳ್ಳಿಗಳಲ್ಲೂ ಸಂಘಟನೆಗೆ ಶಕ್ತಿ ತುಂಬಬೇಕು ಎಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.

ನೂತನ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಮಾತನಾಡಿ, ಎಲ್ಲ ಹಿರಿಯರು ನನ್ನ ಮೇಲೆ ವಿಶ್ವಾಸವಿಟ್ಟು ಈ ಹೊಣೆಗಾರಿಕೆ ವಹಿಸಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ತರದಂತೆ ಶೃದ್ಧೆಯಿಂದ ಕೊಟ್ಟ ಜಿಮ್ಮೇದಾರಿ ಸಮರ್ಥವಾಗಿ ನಿಭಾಯಿಸಲು ಹಗಲಿರುಳೆನ್ನದೇ ತನು, ಮನ, ಧನದಿಂದ ದುಡಿಯುತ್ತೇನೆ. ಹಿರಿಯರ, ಸಮಾಜ ಪ್ರಮುಖರ, ಪೂಜ್ಯರ ಮಾರ್ಗದರ್ಶನದಲ್ಲಿ ಗಡಿ ಜಿಲ್ಲೆಯಲ್ಲಿ ಸಮಾಜದ ಸಂಘಟನೆ ಹಾಗೂ ಇದಕ್ಕೆ ಪೂರಕವಾಗಿ ವಿವಿಧ ಕೆಲಸಕಾರ್ಯಗಳನ್ನು ನಿರಂತರ ನಡೆಸುವ ಧ್ಯೇಯ ಹೊಂದಿದ್ದೇನೆ. ಸಮಾಜದ ಎಲ್ಲರೂ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಪರಿಷದ್ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಮಕೃಷ್ಣ ಸಾಳೆ, ಪ್ರಾಂತ ವಿಶೇಷ ಸಂಪರ್ಕ ಸಹ ಪ್ರಮುಖ ಸತೀಶ್ ನೌಬಾದೆ, ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಯದಲಾಪುರೆ ಬೇಮಳಖೇಡ, ಬಜರಂಗ ದಳ ಜಿಲ್ಲಾ ಸಂಯೋಜಕ ಭೀಮಣ್ಣಾ ಸೋರಳ್ಳಿ ಆಣದೂರ, ಡಾ. ವೀರೇಂದ್ರ ಶಾಸ್ತ್ರಿ, ಜಯಶಂಕರ ಬಿಯಾನಿ ಇತರರಿದ್ದರು. ಅಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿದಂತೆ ನೂತನ ಪದಾಧಿಕಾರಿಗಳಿಗೆ ಅಭಿನಂದಿಸಲಾಯಿತು.
====
ಸನಾತನ ಹಿಂದು ಧರ್ಮಕ್ಕೆ ಶಕ್ತಿ ತುಂಬುವ ಜೊತೆಗೆ ಸದೃಢ ಭಾರತ, ಸಶಕ್ತ-ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ವಿಶ್ವ ಹಿಂದು ಪರಿಷದ್ ವಿಶಿಷ್ಟ ಸೇವೆ ಸಲ್ಲಿಸುತ್ತಿದೆ. ಪ್ರಮುಖರು ಸೇರಿ ನನಗೆ ಜಿಲ್ಲಾ ಜವಾಬ್ದಾರಿ ವಹಿಸಿದ್ದಾರೆ. ಹಿರಿಯರ ಮಾರ್ಗದರ್ಶನ, ಎಲ್ಲರ ಸಹಯೋಗದಿಂದ ಪರಿಷತ್ ಚಟುವಟಿಕೆಗಳಿಗೆ ವೇಗ ನೀಡಲು ಅವಿರತ ಶ್ರಮಿಸುವೆ. ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸುವ ಜೊತೆಗೆ ನಿರಂತರ ಸಮಾಜಪರ ಕಾರ್ಯಕ್ರಮ ನಡೆಸಲಾಗುವುದು.
–ವೀರಶೆಟ್ಟಿ ಖ್ಯಾಮಾ,
ವಿಶ್ವ ಹಿಂದು ಪರಿಷದ್ ಜಿಲ್ಲಾಧ್ಯಕ್ಷ
