ಬೀದರ್ : ಗ್ರಂಥಾಲಯಗಳಿಂದ ಮನುಷ್ಯನ ವ್ಯಕ್ತಿತ್ವವಿಕಸನ, ಜ್ಞಾನ, ತಿಳುವಳಿಕೆ, ಅನುಭವ, ಹೆಚ್ಚಾಗಿ ಮನುಷ್ಯನ ಸರ್ವಾಂಗೀಣ ಅಭಿವೃದ್ದಿಗೆ ಕಾರಣವಾಗುತ್ತದೆ. ಹಾಗಾಗಿ ದೇಶದಲ್ಲಿ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗಬೇಕು, ಮತ್ತು ಇವು ಜನಾಕರ್ಷಣೆಗೊಳಿಸಬೇಕು ಎಂದು ಗ್ರಂಥಾಲಯದ ಪ್ರಭಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಸಾಹಿತಿ ಹಂಸಕವಿಯವರು ಹೇಳಿದರು.
ಅವರು ಎಸ್.ಪಿ. ಆಫೀಸ್ ಬೀದರನ ಪೊಲೀಸ ಗ್ರಂಥಾಲಯದಲ್ಲಿ ಓದುಗರ ವೇದಿಕೆಯಿಂದ ಹಮ್ಮಿಕೊಂಡ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಮುಂದುವರೆದು, ತಾನು ಪೊಲೀಸ ಇಲಾಖೆ ಸೇರಿ 32 ವರ್ಷವಾಗಿದೆ. ಇದರಲ್ಲಿ 12 ವರ್ಷ ಈ ಗ್ರಂಥಾಲಯದ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದೇನೆ. ಪೊಲೀಸ ಇಲಾಖೆ ನನ್ನ ಸಾಹಿತ್ಯ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದರಿಂದ, ಇಲ್ಲಿಯವರೆಗೆ ನನ್ನಿಂದ 191 ಕೃತಿಗಳು ಹೊರಬಂದಿವೆ. ನನ್ನ ಮಾರ್ಗದರ್ಶನದಲ್ಲಿ 225ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಗ್ರಂಥಾಲಯದಿಂದಾಗಿ ಸರ್ಕಾರಿ ಉದ್ಯೋಗಕ್ಕೆ ಸೇರಲು ಕಾರಣವಾಗಿದೆ. ಹಾಗೂ ಎಲ್ಲರ ಸಹಕಾರದಿಂದಾಗಿ ವಿದ್ಯಾರ್ಥಿಗಳಿಗೆ, ವಯಸ್ಕರಿಗೆ, ಈ ಗ್ರಂಥಾಲಯ ಮಾದರಿ ಗ್ರಂಥಾಲಯವಾಗಿ ಅಭಿವೃದ್ದಿ ಪಡಿಸಲಾಗಿದೆ.
ಭಾರತ ದೇಶ ಗ್ರಂಥಾಲಯಗಳ ದೇಶವಾಗಿ ವಿಶ್ವದಲ್ಲಿ ಗಮನ ಸೆಳೆಯಬೇಕು. ಏಕೆಂದರೆ ಈ ದೇಶ ಜ್ಞಾನಿಗಳದೇಶ ಗುರುಗಳದೇಶವಾಗಿದೆ. ಹಾಗಾಗಿ ದೇಶದ ಎಲ್ಲಾ ಹಳ್ಳಿಗಳಲ್ಲೂ, ನಗರಗಳಲ್ಲೂ ಎಲ್ಲಾ ಇಲಾಖೆಗಳಲ್ಲೂ ಗ್ರಂಥಾಲಯಗಳು ಸ್ಥಾಪಿಸಬೇಕು ಎಂದರು.
ಗ್ರಂಥಾಲಯಕ್ಕೆ ಬರುವುದರಿಂದ ಜ್ಞಾನಿಗಳ ಓಡನಾಟ, ಪುಸ್ತಕಗಳ ಹಾಗೂ ಪತ್ರಿಕೆಗಳ ಸಾಂಗತ್ಯ ಹೇರಳವಾಗಿ ಸಿಗುತ್ತದೆ. ಗ್ರಂಥಾಲಯಗಳಲ್ಲಿ ನಮಗೆ ಲಕ್ಷಾಂತರ ರೂಪಾಯಿಗಳ ಪುಸ್ತಕಗಳನ್ನು ಉಚಿತವಾಗಿ ಓದಲು ಸಿಗುತ್ತದೆ. ನಿವೃತ್ತರು ಕೂಡ ಗ್ರಂಥಾಲಯಗಳು ಹೆಚ್ಚೆಚ್ಚು ಬಳಕೆ ಮಾಡಿಕೊಂಡರೆ ಅವರ ಸಮಸ್ಯಗಳು ಪರಿಹಾರಗೊಳ್ಳುತ್ತವೆ. ವಿದ್ಯಾರ್ಥಿಗಳು ಗ್ರಂಥಾಲಯ ಹೆಚ್ಚು ಬಳಕೆ ಮಾಡಿಕೊಂಡರೆ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನುಕೂಲವಾಗುತ್ತದೆ.
ಹಾಗಾಗಿ ಗ್ರಂಥಾಲಯದ ಸಮಯ ಮುಂಜಾನೆ 8:00 ಗಂಟೆಯಿಂದ ರಾತ್ರಿ 8:00 ಗಂಟೆಯವರೆಗೂ ಕಡ್ಡಾಯವಾಗಿ ಕಾರ್ಯನಿರ್ವಹಿಸುವಂತೆ ಆಗಬೇಕು. ಸರ್ಕಾರ ಮೊದಲ ಆದ್ಯತೆಯಾಗಿ ಗ್ರಂಥಾಲಯಗಳ ಅಭಿವೃದ್ದಿಗೊಳಿಸಬೇಕು. ಗ್ರಂಥಾಲಯಗಳು ಜನಪ್ರಿಯವಾಗುವಂತೆ ಮತ್ತು ಜನರಿಗೆ ಹತ್ತಿರವಾಗುವಂತೆ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಬೀದರ ನಗರ ಮುಖ್ಯ ಗ್ರಂಥಾಲಯ ಅಧಿಕಾರಿಯಾದ ಶ್ರೀಮತಿ ಸವಿತಾರವರು ಮಾತನಾಡುತ್ತಾ, ಹಂಸಕವಿಯವರ ಕಾಳಜಿ ಮತ್ತು ನಿಷ್ಠೆಯಿಂದಾಗಿ ಈ ಗ್ರಂಥಾಲಯ ತುಂಬಾ ಜನಪ್ರಿಯಾವಾಗಿ ಬೆಳೆದು ಅಭಿವೃದ್ದಿ ಹೊಂದಿದೆ. ಇವರು ಪೊಲೀಸ ಇಲಾಖೆ ಸ್ನೇಹಿಯಾಗಿ, ಗ್ರಂಥಾಲಯ ಇಲಾಖೆ ಸ್ನೇಹಿಯಾಗಿ ಹಾಗೂ ಓದುಗರ ಸ್ನೇಹಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂದೆಯೂ ಕೂಡ ಇವರ ಸೇವೆ ಈ ಗ್ರಂಥಾಲಯಕ್ಕೆ ಸಲ್ಲುತ್ತಿರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದ ಜೈಭೀಮ ಗ್ರಂಥಾಲಯ ಸಹಾಯಕರವರು ಮಾತನಾಡುತ್ತಾ, ಹಂಸಕವಿಯವರು ಈ ಗ್ರಂಥಾಲಯಕ್ಕೆ ಅಧಿಕಾರಿಯಾಗಿ ತಮ್ಮ ತನು-ಮನ-ಧನದಿಂದ ಪರೋಪಕಾರದಿಂದ ಸೇವೆ ಸಲ್ಲಿಸಿ, ಜನಾನುರಾಗಿಯಾಗಿದ್ದಾರೆ. ನಮಗೂ ಕೂಡ ಒಳ್ಳೆಯ ರೀತಿಯಿಂದ ಸೇವೆ ಸಲ್ಲಿಸಲು ಮಾರ್ಗದರ್ಶನ ಮಾಡಿದ್ದಾರೆ. ಇವರ ಸೇವೆ ಸಾರ್ಥಕ ಸೇವೆಯಾಗಿದೆ ಎಂದರು.
ಓದುಗರ ವೇದಿಕೆಯ ಪ್ರಮುಖರಾದ ಅಮೀತ ಮೇತ್ರೆರವರು ಮಾತನಾಡುತ್ತಾ, ಹಂಸ ಕವಿಯವರು ಓದುಗರ ಓಡನಾಟ ಬೆಳೆಸಿ, ಅವರ ವೈಯಕ್ತಿಕ ಸಮಸ್ಯಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ನಾನು ಕೂಡ ನಿರುದ್ಯೋಗಿಯಾಗಿದ್ದು, ಇವರ ಪ್ರೇರಣೆಯಿಂದ ಕೊಚ್ಚಿಂಗ್ ಸೆಂಟರ್, ಹಾಗೂ ಸ್ಕೂಲ್ ನಡೆಸುತ್ತಿದ್ದೇನೆ ಎಂದರು. ಇನ್ನೊಬ್ಬ ಓದುಗರಾದ ದಿನೇಶ ಔರಾದರವರು ಮಾತನಾಡುತ್ತಾ, ಹಂಸಕವಿಯವರು ವೈಯಕ್ತಿಕ ಮುತುವರ್ಜಿವಹಿಸಿ ಒಳ್ಳೆಯ ವ್ಯವಸ್ಥೆ ಮತ್ತು ಒಳ್ಳೆಯ ಉಪಯೋಗಿ ಪುಸ್ತಕಗಳನ್ನು ಈ ಗ್ರಂಥಾಲಯದಲ್ಲಿ ಇಟ್ಟು ಓದುಗರಿಗೆ ಅನುಕೂಲ ಮಾಡಿಕೊಟ್ಟಿದಾರೆ. ಕಡುಬಡವನಾದ ಮತ್ತು ನಿರ್ಗತಿಕನಾದ ನನಗೆ ಇವರು ಓದಿನಲ್ಲಿ ಆಸಕ್ತಿ ಮೂಡಿಸಿದ್ದಾರೆ. ನನ್ನಂತೆ ಬಹಳಷ್ಟು ವಿದ್ಯಾರ್ಥಿಗಳಿಗೆ ಒಳ್ಳೆಯ ಸಾಧಕರಾಗಲು ಇವರು ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಓದುಗರ ವೇದಿಕೆಯಿಂದ ಹಂಸಕವಿ ದಂಪತಿರವರಿಗೆ ಆತ್ಮೀಯವಾಗಿ ಸತ್ಕಾರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ ಇಲಾಖೆಯವರು, ಗ್ರಂಥಾಲಯ ಇಲಾಖೆಯವರು, ಸಾಹಿತಿಗಳು ಹಾಗೂ ಹಂಸಕವಿ ಪರಿವಾರದವರು ಪಾಲ್ಗೊಂಡಿದರು.