ತಕ್ಷಣ ಕ್ರಮಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಅಧಿಕಾರಿಗಳಿಗೆ ಸೂಚನೆ

ಕಲಬುರಗಿ : ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬರುವ ಪಟ್ಟಣ ಸರ್ಕಲ್ನ ವ್ಯಾಪ್ತಿಯಲಲ ಭಾರಿ ಹಾನಿ ಸಂಭವಿಸಿದೆ. ರಸ್ತೆಗುಂಟ ವಿದ್ಯುತ್ ಕಂಬಗಳು ಬಿದ್ದು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ತೋಟಗಾರಿಕೆ ಬೆಳೆಗಳಾದ ಪಪ್ಪಾಯಿ, ಬಾಳೆ ಧರೆಗುರುಳಿವೆ. ತಕ್ಷಣ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಪರಿಹಾರ ಕ್ರಮ ಕೈಗೊಳ್ಳುವಂತೆ ಶಾಸಕರಾದ ಅಲ್ಲಂಪ್ರಭು ಪಾಟೀಲರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ದೂರವಾಣಿ ಮೂಲಕ ಅಧಿಕಾರಿಗಳಿಗೆಲ್ಲರಿಗೂ ಮಾತನಾಡಿರುವ ಶಾಸಕರು, ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಇದರಿಂದಾಗಿ ರೈತರಿಗೆ, ಜನರಿಗೆ ತೊಂದರೆಯಾಗಿದೆ. ತಕ್ಷಣ ಕಂಬಗಳನ್ನು ಸರಿಪಡಿಸಿ ಆಗಿರುವ ತೊಂದರೆ ಪರಿಹಾರಸುವಂತೆ ಜೆಸ್ಕಾಂ ಸೆಕ್ಷನ್ ಅಧಿಕಾರಿಗಳು, ಇಂಜಿನಿಯರ್ಗಳಿಗೆ ಸೂಚಿಸುವಂತೆ ಎಂಡಿ ರವೀಂದ್ರ ಕರಿಲಿಂಗಣ್ಣನವರ್ ಅವರಿಗೆ ಸೂಚಿಸಿದ್ದಾರೆ.
ಇನ್ನು ಧರೆಗೆ ಬಿದ್ದಿರುವ ಪಪ್ಪಾಯಿ, ಬಾಳೆ ಬೆಳೆಗಳ ಬಗ್ಗೆಯೂ ಸೂಕ್ತ ಸಮೀಕ್ಷೆ ಕೈಗೊಂಡು ನೊಂದ ರೈತರ ಕಣ್ಣೀರು ಒರೆಸಬೇಕು, ತಕ್ಷಣ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳಿಗೂ ಶಸಾಕ ಅಲ್ಲಂಪ್ರಭು ಪಾಟೀಲರು ಸೂಚಿಸಿದ್ದಾರೆ.
ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿಯಿಂದಾಗಿ ಮನೆಗಳ ಮೇಲೆ ಹಾಕಲಾಗಿದ್ದ ಝಿಂಕ್ ಶೀಟ್ಗಳೇ ಹಾರಿ ಹೋಗಿವೆ. ಇದರಿದಂ ಅನೇಕ ಕುಟುಂಬಗಳು ಸೂರಿಲ್ಲದಂತಾಗಿವೆ. ಈ ಬಗ್ಗೆಯೂ ಸಮೀಕ್ಷೆ ನಡೆಸಿ ಅಂತಹ ಕುಟುಂಬಗಳಿಗೆ ಸೂಕ್ತ ನೆರವಿಗೆ ಧಾವಿಸುವಂತೆಯೂ ಕಲಬುರಗಿ ತಹಶೀಲ್ದಾರ್ ಅವರಿಗೆ ಶಾಸಕರು ಸೂಚಿಸಿದ್ದಾರೆ.